ಮಂಗಳೂರು ಜೂನ್ 02: “ಉಪಮುಖ್ಯಮಂತ್ರಿ (DCM) ಆಗುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದನ್ನು ನಾನೂ ನೋಡಿದ್ದೇನೆ. ಆದರೆ, ಈ ಬಗ್ಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ನಾನು ಈಗಲೂ ಸ್ಪೀಕರ್ ಆಗಿಯೇ ಇದ್ದೇನೆ, ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ” ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟ ಸೇರ್ಪಡೆಗೆ ಕಾಂಗ್ರೆಸ್ನಲ್ಲಿ ಭಾರೀ ಪೈಪೋಟಿ ಎದುರಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಸುದೀರ್ಘ ಪ್ರತಿಕ್ರಿಯೆ ನೀಡಿದರು. “ಸಚಿವ ಸ್ಥಾನ ಯಾರಿಗೆ ನೀಡಬೇಕು, ಯಾವ ಖಾತೆ ಹಂಚಿಕೆ ಮಾಡಬೇಕು ಎಂಬುದು ಸರ್ಕಾರ ಹಾಗೂ ಹೈಕಮಾಂಡ್ ಪಕ್ಷಕ್ಕೆ ಬಿಟ್ಟ ವಿಚಾರ. ನನಗೆ ಸ್ಥಾನಮಾನ ನೀಡುವುದಾದರೆ, ಈವರೆಗಿನ ನನ್ನ ಕೆಲಸವನ್ನು ನೋಡಿ ಹಿರಿಯರು ನಿರ್ಧಾರ ಕೈಗೊಳ್ಳುತ್ತಾರೆ” ಎಂದರು.
ತಮ್ಮ ರಾಜಕೀಯ ನಿಲುವನ್ನು ಬಿಚ್ಚಿಟ್ಟ ಖಾದರ್, “2023 ರಲ್ಲಿ ನನಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ, ಪಕ್ಷ ನನಗೆ ಜವಾಬ್ದಾರಿಯುತ ಸಭಾಧ್ಯಕ್ಷ ಸ್ಥಾನವನ್ನು ನೀಡಿತು. ಅದನ್ನು ಕಳೆದ ಮೂರು ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ನಿಭಾಯಿಸಿದ್ದೇನೆ. ನನಗೆ ಹುದ್ದೆ ಮುಖ್ಯವಲ್ಲ, ಮಾಡುವ ಕೆಲಸ ಮುಖ್ಯ (Post is not important, work is important). ಸದ್ಯಕ್ಕೆ ನಾನು ಸ್ಪೀಕರ್ ಸ್ಥಾನದಲ್ಲಿದ್ದು, ಆ ಜವಾಬ್ದಾರಿಯಿಂದ ಹೊರಬಂದ ಮೇಲಷ್ಟೇ ರಾಜಕೀಯ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತೇನೆ. ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಇರಲಿದ್ದೇನೆ” ಎಂದು ತಿಳಿಸಿದರು.
ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಶಾಸಕರು ನಡೆಸುತ್ತಿರುವ ಲಾಬಿ ಕುರಿತು ಮಾತನಾಡಿದ ಅವರು, “ರಾಜಕೀಯ ಬೇರೆ, ವರಿಷ್ಠ ನಾಯಕರನ್ನು ಭೇಟಿಯಾಗುವ ವಿಚಾರವೇ ಬೇರೆ. ಶಾಸಕರಾದ ಮೇಲೆ ಹಿತೈಷಿಗಳಾಗಿ ನಾಯಕರನ್ನು ಭೇಟಿಯಾಗುವುದು ಸಹಜ. ಆದರೆ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಕಾಂಗ್ರೆಸ್ ಪಕ್ಷ, ಕಾರ್ಯಕರ್ತರು ಮತ್ತು ನನ್ನ ಕ್ಷೇತ್ರದ ಮತದಾರರು. ಶಾಸಕನಾದವನು ಜೀವನದಲ್ಲಿ ಒಮ್ಮೆಯಾದರೂ ಸ್ಪೀಕರ್ ಸ್ಥಾನ ಅಲಂಕರಿಸಬೇಕು. ಸದ್ಯಕ್ಕೆ ನಾನು ಸ್ಪೀಕರ್ ಆಗಿ ಅತ್ಯಂತ ಖುಷಿಯಿಂದ ಇದ್ದೇನೆ. ನನ್ನ ಮೂರು ವರ್ಷಗಳ ಕರ್ತವ್ಯದ ಕೆಲಸ ನೋಡಿ ಪಕ್ಷ ಬೇರೆ ಯಾವುದೇ ಹೊಸ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ” ಎಂದರು