KARNATAKA
ತಂದೆಯನ್ನು ಹೊರಹಾಕಿದ ಮಗನಿಗೆ ತಕ್ಕಶಾಸ್ತಿ: ಮಗನನ್ನೇ ಹೊರಹಾಕುವಂತೆ ಕೋರ್ಟ್ ಆದೇಶ
ಚಿಕ್ಕಬಳ್ಳಾಪುರ, ಜನವರಿ 25: ಮನೆಯಿಂದ ತಂದೆಯನ್ನು ಹೊರಹಾಕಿದ್ದ ಮಗನಿಗೆ ನ್ಯಾಯಾಲಯ ತಕ್ಕಶಾಸ್ತಿ ಮಾಡಿದೆ. ಮನೆಯಿಂದ ಮಗನನ್ನೇ ಹೊರಹಾಕುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿ ಅವರನ್ನು ಮಗ ಎಂ.ಸುಭಾಷ್ ಮತ್ತು ಸೊಸೆ ಮಂಜುಳಾ ಬಲವಂತಾಗಿ ಮನೆಯಿಂದ ಹೊರಹಾಕಿದ್ದರು. ಅಂಜನಿ ಬಡಾವಣೆಯ ಮನೆಯನ್ನು ಮುನಿಸ್ವಾಮಿ ಸ್ವಯಾರ್ಜಿತವಾಗಿ ಖರೀದಿಸಿದ್ದರು.
ಮಗ ಮನೆಯಿಂದ ಹೊರ ಹಾಕಿದ್ದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಎಸಿ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ಮುನಿಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿರುವ ಕೋರ್ಟ್, ಅಕ್ರಮವಾಗಿ ಮನೆ ಪ್ರವೇಶಿಸಿದ್ದ ಮಗ ಸುಭಾಷ್ ಮತ್ತು ಸೊಸೆ ಮಂಜುಳಾರನ್ನು ಹೊರಹಾಕಿ ಮುನಿಸ್ವಾಮಿ ಪ್ರವೇಶ ಕಲ್ಪಿಸುವಂತೆ ಪೊಲೀಸರಿಗೆ ಆದೇಶ ಹೊರಡಿಸಿದೆ.
ಕೋರ್ಟ್ನ ಆದೇಶದಂತೆ ಮಗ ಮತ್ತು ಸೊಸೆಯನ್ನ ಹೊರಹಾಕಿರುವ ಚಿಂತಾಮಣಿ ಪೊಲೀಸರು ಮುನಿಸ್ವಾಮಿಗೆ ಪ್ರವೇಶ ಕಲ್ಪಿಸಿದ್ದಾರೆ. ಮನೆಯಿಂದ ಹೊರಹಾಕಿದ್ದಕ್ಕೆ ಮುನಿಸ್ವಾಮಿ ವಿರುದ್ಧ ಮಗ ಮತ್ತು ಸೊಸೆ ಹಿಡಿಶಾಪ ಹಾಕಿದ್ದಾರೆ. ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಿದೆ.
You must be logged in to post a comment Login