ಮಂಗಳೂರು ಮಾರ್ಚ್ 02: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದಕ್ಕೆ ಕಮೆಂಟ್ ನಲ್ಲಿ ‘ಸಪೋರ್ಟ್‌ ಮಾಡಿ ಬ್ರೋ. ಉಳ್ಳಾಲ ಮಸೀದಿ ಹತ್ತಿರ ಬಾಂಬ್‌ ಬ್ಲಾಸ್ಟ್‌ ಮಾಡುತ್ತೇನೆ’ ಮೆಸೆಜ್ ಹಾಕಿದ್ದ ವ್ಯಕ್ತಿಯ ವಿರುದ್ದ ಇದೀಗ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.


ಫೇಸ್‌ಬುಕ್‌ನಲ್ಲಿ ಬೇರೊಬ್ಬರು ಹಂಚಿಕೊಂಡ ಪೋಸ್ಟ್‌ಗೆ ‘ಶಂಕರ್‌11916’ ಎಂಬ ಖಾತೆಯನ್ನು ಬಳಸಿ ಈ ರೀತಿ ಕಮೆಂಟ್‌ ಮಾಡಲಾಗಿದೆ. ಮೊಹಮ್ಮದ್ ರಿಯಾಜ್ ಕಡಂಬು ಅವರು ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡು, ‘ಆರೋಪಿಯನ್ನು ಪೊಲೀಸರು ಕೂಡಲೇ ಬಂಧಿಸುತ್ತಾರೆ ಎಂದು ಭಾವಿಸುತ್ತೇನೆ. ಯಾವುದಕ್ಕೂ ಉಳ್ಳಾಲ ಮಸೀದಿಗಳ ಬಳಿ ಬಾಂಬ್ ಪತ್ತೆ ದಳವನ್ನು ಕಳುಹಿಸಿ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು‘ ಎಂದು ಒತ್ತಾಯಿಸಿದ್ದರು.

‘ಈ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿರುವ ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ, ‘ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟಿಸುತ್ತೇನೆ ಎಂಬ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅಪರಾಧ. ಉಳ್ಳಾಲ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಶೀಘ್ರವೇ ಬಂಧಿಸುತ್ತೇವೆ’ ಎಂದು ತಿಳಿಸಿದ್ದಾರೆ.

Share Information