ಇಂದೋರ್,ಮಾರ್ಚ್ 27: ವಸತಿ ಸಂಕೀರ್ಣವೊಂದರಲ್ಲಿ ಪೆಂಟ್ಹೌಸ್ನ ವಾಣಿಜ್ಯ ಬಳಕೆಯ ಕುರಿತು ನಡೆದ ಗಲಾಟೆಯು ರಕ್ತಪಾತದಲ್ಲಿ ಅಂತ್ಯಗೊಂಡಿದೆ. ಇಂದೋರ್ನ ಲಸೂಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ‘ಶಿವ ವಾಟಿಕಾ’ ಟೌನ್ಶಿಪ್ನಲ್ಲಿ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ನಿವಾಸಿಗಳ ಮೇಲೆ ಕಾರು ಹರಿಸಿದ ಪರಿಣಾಮ ಇನ್ಫೋಸಿಸ್ ಸಾಫ್ಟ್ವೇರ್ ಎಂಜಿನಿಯರ್ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಆರೋಪಿ ಕುಲದೀಪ್ ಚೌಧರಿ ಎಂಬುವವರು ತಮ್ಮ ಪೆಂಟ್ಹೌಸ್ ಅನ್ನು Airbnb ಮೂಲಕ ಪ್ರವಾಸಿಗರಿಗೆ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಾಡಿಗೆಗೆ ನೀಡುತ್ತಿದ್ದರು. ಇದರಿಂದ ಅಪಾರ್ಟ್ಮೆಂಟ್ಗೆ ಅಪರಿಚಿತರ ಓಡಾಟ ಹೆಚ್ಚಾಗಿ ನಿವಾಸಿಗಳ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ಇತರ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವಾಗಿ ಕಳೆದ ಕೆಲವು ದಿನಗಳಿಂದ ಸಂಘರ್ಷ ನಡೆಯುತ್ತಿತ್ತು.
ಘಟನೆಯ ದಿನ ಪೆಂಟ್ಹೌಸ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ವಿಚಾರವಾಗಿ ಕುಲದೀಪ್ ಮತ್ತು ನಿವಾಸಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸುಮಾರು 15 ಮಂದಿ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಕುಲದೀಪ್ ತನ್ನ 18 ವರ್ಷದ ಮಗ ಮೋನಿಶ್ ಚೌಧರಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಮಗ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು, ಅಲ್ಲಿ ನಿಂತಿದ್ದ ಜನರ ಗುಂಪಿನ ಮೇಲೆ ನೇರವಾಗಿ ಹರಿಸಿದ್ದಾನೆ.

ಈ ಭೀಕರ ಕೃತ್ಯಕ್ಕೆ 30 ವರ್ಷದ ಶಂಪಾ ಪಾಂಡೆ ಬಲಿಯಾಗಿದ್ದಾರೆ. ಮೂಲತಃ ಒಡಿಶಾದವರಾದ ಇವರು ಇನ್ಫೋಸಿಸ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಚ್ 13 ರಂದಷ್ಟೇ ಅವರು ಈ ಅಪಾರ್ಟ್ಮೆಂಟ್ಗೆ ವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್ ಪತ್ನಿ ಸೇರಿದಂತೆ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಅಪಾರ್ಟ್ಮೆಂಟ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. “ಕಾರು ಚಾಲಕ ಉದ್ದೇಶಪೂರ್ವಕವಾಗಿ ಜನರ ಮೇಲೆ ವಾಹನ ಹರಿಸುತ್ತಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಲಸೂಡಿಯಾ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಂದೆ ಕುಲದೀಪ್ ಮತ್ತು ಮಗ ಮೋನಿಶ್ ಇಬ್ಬರನ್ನೂ ಬಂಧಿಸಿದ್ದಾರೆ. ಇವರ ವಿರುದ್ಧ ಕೊಲೆ (IPC 302) ಮತ್ತು ಕೊಲೆ ಯತ್ನದ ಪ್ರಕರಣಗಳನ್ನು ದಾಖಲಿಸಲಾಗಿದೆ.