ಬೆಳ್ತಂಗಡಿ ಸೆಪ್ಟೆಂಬರ್ 08: ಧರ್ಮಸ್ಥಳ ಬುರುಡೆ ಪ್ರಕರಣವೇ ಇನ್ನೂ ಗೊಂದಲಗಳಿಂದ ಕೂಡಿದ್ದು, ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದರೆ ಇದೀಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಮುಡಾ ಪ್ರಕರಣ ಖ್ಯಾತಿಯ ಸ್ನೇಹಮಯಿ ಕೃಷ್ಣ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಸೋದರಮಾವ ವಿಠಲ ಗೌಡನೇ ಪ್ರಮುಖ ಆರೋಪಿ ಎಂದು ಆರೋಪಿ ಮರು ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸೌಜನ್ಯಳ ಸೋದರಮಾವ ವಿಠಲ ಗೌಡನಿಗೆ ಆಕೆಯ ಮೇಲೆ ಕೆಟ್ಟ ದೃಷ್ಟಿ ಇತ್ತು. ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದ. ಇದಕ್ಕೆ ಸೌಜನ್ಯ ಒಪ್ಪದಿದ್ದಾಗ, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಬೇರೆ ಸ್ಥಳದಲ್ಲಿ ಕೊಲೆಗೈದು, ಬಳಿಕ ಮೃತದೇಹವನ್ನು ಈಗಿರುವ ಸ್ಥಳಕ್ಕೆ ತಂದು ಹಾಕಲಾಗಿದೆ ಎಂದು ಸ್ನೇಹಮಯಿ ಶಂಕೆ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು ನೋಡಿದ್ದ ಸಂತೋಷ್ ರಾವ್ನನ್ನು ಬೆದರಿಸಿ ಪ್ರಕರಣದಲ್ಲಿ ಸಿಲುಕಿಸಿರಬಹುದು ಅಂದು ಅನುಮಾನ ವ್ಯಕ್ತಪಡಿಸಿದ್ದಾರೆ. ತಮ್ಮ ಆರೋಪವನ್ನು ಸಮರ್ಥಿಸಲು ಸ್ನೇಹಮಯಿ ಕೃಷ್ಣ ಅವರು ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಕೂಡ ಮುಂದಿಟ್ಟಿದ್ದಾರೆ. ಸೌಜನ್ಯಳ ತಾಯಿ ಕುಸುಮಾವತಿ ಅವರಿಗೂ ತಮ್ಮ ಸಹೋದರ ವಿಠಲ ಗೌಡನ ಮೇಲೆ ಮೊದಲಿನಿಂದಲೂ ಅನುಮಾನ ಇತ್ತು. ಈ ಕಾರಣದಿಂದಲೇ ಅವರು ಮಗಳ ಮೃತದೇಹವನ್ನು ನೋಡಲು ಹೋಗಿರಲಿಲ್ಲ. ಅಲ್ಲದೆ, ಕೊಲೆ ನಡೆದ ದಿನದಂದು ವಿಠಲ ಗೌಡ ತನ್ನ ಹೋಟೆಲ್ ಕೆಲಸಕ್ಕೆ ರಜೆ ಹಾಕಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ.
ಸೌಜನ್ಯಳ ಮೃತದೇಹ ಪತ್ತೆಯಾದಾಗ ಆಕೆಯ ಬೆನ್ನಿನ ಮೇಲೆ ಬ್ಯಾಗ್ ಇತ್ತು ಎಂದಿರುವ ಕೃಷ್ಣ, ಅಪರಿಚಿತರು ಅತ್ಯಾಚಾರ ಎಸಗಿದ್ದರೆ ಈ ರೀತಿ ಇರಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಎಲ್ಲಾ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣದ ಸಂಪೂರ್ಣ ಮರು ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ. ವಿಠಲ ಗೌಡರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿರುವ ಅವರು, ಇದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ದೂರನ್ನು ಸ್ವೀಕರಿಸಿದರುವ ಪೊಲೀಸರು ಅದನ್ನು ಧರ್ಮಸ್ಥಳ ಠಾಣೆಗೆ ಕಳುಹಿಸಿದ್ದಾರೆ. ದೂರನ್ನು ಪರಿಶೀಲನೆ ಮಾಡಿದ ಬಳಿಕ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕ್ಷಕರು ತಿಳಿಸಿದ್ದಾರೆ.



