ಧರ್ಮಸ್ಥಳ ಸೆಪ್ಟೆಂಬರ್ 10: ಧರ್ಮಸ್ಥಳ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್ ಐಟಿ ಇಂದು ಮತ್ತೆ ಸೌಜನ್ಯ ಮಾವ ವಿಠಲ ಗೌಡ ಅವರನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪ ಇರುವ ಬಂಗ್ಲಗುಡ್ಡ ಕರೆದೊಯ್ದು ಮಹಜರು ನಡೆಸಿದೆ.

ವಿಠಲ ಗೌಡ ಬುಧವಾರ ಬೆಳಿಗ್ಗೆ ಎಸ್ಐಟಿ ಕಚೇರಿಗೆ ಹಾಜರಾಗಿದ್ದರು. ಅವರಿಂದ ಹೇಳಿಕೆ ದಾಖಲಿಸಿಕೊಂಡ ಎಸ್ಐಟಿ ಅಧಿಕಾರಿಗಳು ಎಸ್.ಪಿ. ಸೈಮನ್ ನೇತೃತ್ವದಲ್ಲಿ ವಿಠಲ ಗೌಡನನ್ನು ಬುರುಡೆ ಸಿಕ್ಕಿದ್ದ ಜಾಗಕ್ಕೆ ಕರೆದೊಯ್ದರು.
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಬುರುಡೆ ಇದ್ದ ಜಾಗವನ್ನು ವಿಠಲ ಗೌಡ ಅವರೇ ಸಾಕ್ಷಿದೂರುದಾರನಿಗೆ ತೋರಿಸಿದ್ದರು. ಅಲ್ಲಿಂದ ತೆಗೆದ ಬುರುಡೆಯನ್ನೇ ಸಾಕ್ಷಿ ದೂರುದಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದ. ಆ ಜಾಗವನ್ನು ಎಸ್ಐಟಿ ಅಧಿಕಾರಿಗಳು ಸೆ.6ರಂದು ಸಂಜೆ ಮಹಜರು ನಡೆಸಿದ್ದರು. ಈ ವೇಳೆ ಆ ಪ್ರದೇಶದಲ್ಲಿ ಮೃತದೇಹ ಅವಶೇಷಗಳು ನೆಲದ ಮೇಲೆಯೇ ಕಂಡುಬಂದಿದ್ದವು. ಅಂದು ಕತ್ತಲಾವರಿಸಿದ್ದರಿಂದ ಆ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸುವುದು ಸಾಧ್ಯವಾಗಿರಲಿಲ್ಲ. ಹಾಗಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಎಸ್ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಮತ್ತೊಮ್ಮೆ ಅಲ್ಲಿಗೆ ಕರೆದೊಯ್ದರು.



