ಮಂಗಳೂರು ಡಿಸೆಂಬರ್ 29: ಪ್ರಿತಿಸಿ ಬಳಿಕ ಮಗು ಕರುಣಿಸಿ ಇದೀಗ ಮದುವೆಗೆ ನಿರಾಕರಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಪ್ರಕ್ರಿಯೆಗೆ ಕೃಷ್ಣ ಜೆ ರಾವ್ ಅವರ ಮನೆಯವರು ನಿರಾಕರಿಸಿದ್ದು, ಇನ್ನು ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಶ್ವಕರ್ಮ ಸಮಾಜದ ಮುಂದಾಳು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಮಗು ಸಹಿತ ಸಂತ್ರಸ್ತೆ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಜೆ. ರಾವ್ ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದು, ಆಕೆ ಆತನಿಂದ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣನೇ ಎಂದು ದೃಢಪಟ್ಟಿದೆ. ಹೀಗಾಗಿ ಆಕೆಯನ್ನು ವಿವಾಹವಾಗುವಂತೆ ಹಲವು ಬಾರಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಹುಡುಗನ ತಂದೆ ಜಗನ್ನಿವಾಸ ರಾವ್ ಜೊತೆಗೆ ಮಾತುಕತೆ ಮಾಡಿದ್ದೆವು. ಆದರೆ ಅವರ ಷರತ್ತುಗಳನ್ನು ಕೇಳಿದರೆ ನಮಗೇ ಬಾಯಿ ಬರುವುದಿಲ್ಲ. ಅಷ್ಟೊಂದು ಅಸಹ್ಯವಾಗಿದೆ, ಬಾಯಲ್ಲಿ ಹೇಳಲಾಗದ ಮಾತುಗಳನ್ನು ಆಡಿದ್ದಾರೆ. ನ್ಯಾಯಾಧೀಶರ ಮೂಲಕ ಸ್ಯಾಂಪಲ್ ಸಂಗ್ರಹಿಸಿ ಡಿಎನ್ಎ ವರದಿ ತರಿಸಿಕೊಂಡರೂ ಇವರು ನಂಬುತ್ತಿಲ್ಲ. ನಾವು ಈ ವಿಚಾರವನ್ನು ವಕೀಲರ ಮೂಲಕ ಕೋರ್ಟ್ ಗಮನಕ್ಕೆ ತರುತ್ತಿದ್ದೇವೆ. ಇಲ್ಲಿ ಎರಡು ಕಡೆಯೂ ತಪ್ಪಾಗಿದೆ, ಈಗ ಹುಡುಗಿ ಮತ್ತು ಆಕೆಯ ತಾಯಿ ಮಗು ಹಿಡಿದು ಅಂಗಲಾಚುತ್ತಿದ್ದಾರೆ. ಬಲಾಢ್ಯರು ಏನು ಮಾಡಿದರೂ ನಡೆಯುತ್ತೆ ಎಂದರೆ ನಮ್ಮ ಸಮಾಜದ ಸ್ಥಿತಿ ಎಲ್ಲಿ ಮುಟ್ಟಿತು ಅನ್ನುವ ಪ್ರಶ್ನೆ ಬರುತ್ತದೆ.
ಯುವತಿ ಬಡ ಕುಟುಂಬವಾಗಿದ್ದು, ಇಬ್ಬರೂ ಒಂದಾಗಿ ಸಂಸಾರ ಮುನ್ನಡೆಸುವ ಯೋಚನೆಯಲ್ಲಿ ಆತನ ಪೋಷಕರ ಜೊತೆ ಸಂಧಾನ ನಡೆಸಲಾಗಿದೆ. ಆದರೆ ಆತನ ಪೋಷಕರು ವಿವಾಹಕ್ಕೆ ಆತ ಸಮ್ಮತಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಂಧಾನ ಮುರಿದುಬಿದ್ದಿದ್ದು, ಕಾನೂನು ಹೋರಾಟವೇ ಅನಿವಾರ್ಯವಾಗಿದೆ. ಅದರಲ್ಲಿ ಸಂತ್ರಸ್ತೆಗೆ ನ್ಯಾಯಸಿಗುತ್ತದೆ ಎಂಬ ಭರವಸೆ ಇದೆ ಎಂದರು.
ಕೃಷ್ಣನ ಪೋಷಕರು ಈಡೇರಿಸಲು ಸಾಧ್ಯವಾಗದ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅವುಗಳನ್ನು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಒಂದೆರಡು ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದರು.