ಮಂಗಳೂರು: “ನಾನು ಮುಂಬೈಗೆ ಹೋಗದೆ ಮಂಗಳೂರಿನಲ್ಲೇ ಉಳಿದುಕೊಂಡಿದ್ದರೆ, ಇಲ್ಲಿನ ಪ್ರಸಿದ್ಧ ಸೆಂಟ್ ಅಲೋಶಿಯಸ್, ಶಾರದಾ ಅಥವಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಇದೇ ಊರಿನಲ್ಲಿ ಶಿಕ್ಷಕನಾಗಿ ನೆಲೆಸುತ್ತಿದ್ದೆ!” ಎಂದು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದ ಮುಂಚೂಣಿ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಆಯೋಜಿಸಿದ್ದ ‘ಆ್ಯನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಎಂಬ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೇದಿಕೆಗೆ ಬರುತ್ತಿದ್ದಂತೆಯೇ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ “ನಮಸ್ಕಾರ ಕುಡ್ಲ, ಎಂಚ ಉಲ್ಲರ್?” (ನಮಸ್ಕಾರ ಮಂಗಳೂರು, ಹೇಗಿದ್ದೀರಾ?) ಎಂದು ತುಳು ಭಾಷೆಯಲ್ಲೇ ಮಾತು ಆರಂಭಿಸಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಮನಗೆದ್ದರು.

ಪಣಂಬೂರು ಕಡಲತೀರ ಮತ್ತು ಬಾಲ್ಯದ ನಂಟು:
ತಮ್ಮ ವೃತ್ತಿಜೀವನದಲ್ಲಿ 34 ಯಶಸ್ವಿ ವರ್ಷಗಳನ್ನು ಪೂರೈಸಿರುವ ಕಿಂಗ್ ಖಾನ್, ಮಂಗಳೂರಿನೊಂದಿಗಿನ ತಮ್ಮ ಬಾಲ್ಯದ ಅಪರೂಪದ ನಂಟನ್ನು ನೆನಪಿಸಿಕೊಂಡರು. “ನನ್ನ ಅಜ್ಜ ಮಂಗಳೂರಿನ ಎನ್ಎಂಪಿಟಿ (NMPT) ಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆ ಕಾರಣಕ್ಕಾಗಿ 1965 ರಿಂದ 1967ರ ಅವಧಿಯಲ್ಲಿ ನನ್ನ ಬಾಲ್ಯದ ದಿನಗಳನ್ನು ನಾನು ಪಣಂಬೂರಿನ ಕಡಲತೀರದಲ್ಲೇ ಕಳೆದಿದ್ದೆ. ಆಗ ನಾನು ತೀರಾ ಸಣ್ಣ ಮಗುವಾಗಿದ್ದರಿಂದ ಆ ದಿನಗಳು ನೇರವಾಗಿ ನೆನಪಿಲ್ಲದಿದ್ದರೂ, ನನ್ನ ಹಿರಿಯರು ಹೇಳುತ್ತಿದ್ದ ಕಥೆಗಳು ಇಂದಿಗೂ ನನ್ನ ಮನಸಿನಲ್ಲಿ ಹಸಿರಾಗಿವೆ” ಎಂದು ಭಾವುಕರಾದರು. ಇದೇ ವೇಳೆ ತಮ್ಮ ಜೇಬಿನಿಂದ ಬಾಲ್ಯದ ಅಪರೂಪದ ಫೋಟೊ ಒಂದನ್ನು ತೆಗೆದು ಅಭಿಮಾನಿಗಳಿಗೆ ಪ್ರದರ್ಶಿಸಿದರು.
ಕುಡ್ಲದ ನೀರು ದೋಸೆ ಎಂದರೆ ಅಚ್ಚುಮೆಚ್ಚು:

ಕರಾವಳಿಯ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಾರುಖ್, “ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಇಲ್ಲಿನ ಜನರ ಆತಿಥ್ಯ ನನ್ನನ್ನು ಸದಾ ಆಕರ್ಷಿಸುತ್ತದೆ. ಕರಾವಳಿಗರು ಮತ್ತು ಮುಂಬೈ ನಡುವೆ ದಶಕಗಳ ಹಳೆಯ ನಂಟಿದೆ. ಮುಂಬೈನಲ್ಲಿ ಭಾರಿ ಸಂಖ್ಯೆಯ ಕರಾವಳಿ ಜನರಿದ್ದಾರೆ. ಇನ್ನು ನನಗೆ ಕುಡ್ಲದ ಖಾದ್ಯಗಳಲ್ಲಿ ‘ನೀರು ದೋಸೆ’ ಎಂದರೆ ಪ್ರಾಣ. ಕೇವಲ ನೀರು ದೋಸೆ ತಿನ್ನುವುದಕ್ಕಾಗಿಯೇ ನಾನು ಇನ್ನೊಮ್ಮೆ ಮಂಗಳೂರಿಗೆ ಬರುತ್ತೇನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶಾರುಖ್ ಖಾನ್ ಅವರು ತಮ್ಮ ಸಿನಿಮಾಗಳ ಸೂಪರ್ ಹಿಟ್ ಹಾಡುಗಳಾದ ‘ಚಮ್ಮಕ್ ಚಲ್ಲೋ’ ಮತ್ತು ‘ಝೂಮೇ ಜೋ ಪಠಾಣ್’ ಹಾಡುಗಳಿಗೆ ವೇದಿಕೆಯ ಮೇಲೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ನೆರೆದಿದ್ದ ಕರಾವಳಿಯ ಜನರನ್ನು ರೋಮಾಂಚನಗೊಳಿಸಿದರು. ಗ್ರ್ಯಾಂಡ್ ಈವೆಂಟ್ನಲ್ಲಿ ಸೇರಿದ್ದ ನೂರಾರು ಅಭಿಮಾನಿಗಳಲ್ಲಿ ಒಬ್ಬರಾದ ಮಹಿಳೆಯೋರ್ವರು ಮೈಕ್ ಹಿಡಿದು, ನನ್ನ ಗಂಡನಿಗಿಂತಲೂ ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಕೂಗಿ ಹೇಳಿದರು.
ಇದನ್ನು ಕೇಳಿ ವೇದಿಕೆ ಮೇಲಿದ್ದ ನಿರೂಪಕಿ ಮತ್ತು ಸಾರ್ವಜನಿಕರು ಜೋರಾಗಿ ನಕ್ಕರು. ಆದರೆ, ಶಾರುಖ್ ಖಾನ್ ಅವರು ಈ ಮಾತನ್ನು ಕೇವಲ ಹಾಸ್ಯವಾಗಿ ತೆಗೆದುಕೊಳ್ಳದೇ, ಅವರಿಗೆ ಒಂದು ಕಿವಿಮಾತನ್ನೂ ಹೇಳಿದರು. ಮೈಕ್ ಕೈಗೆತ್ತಿಕೊಂಡ ಶಾರುಖ್, ನಿಮ್ಮ ಈ ಪ್ರೀತಿಯನ್ನು ನಾನು ಗೌರವಿಸುತ್ತೇನೆ. ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಪತಿ ಪತ್ನಿ ನಡುವಿನ ಪ್ರೀತಿ ಬಹಳ ಮುಖ್ಯವಾದದ್ದು. ನಿಮ್ಮ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಪತಿಗೂ ಅದು ಅರ್ಥವಾಗಿದೆ ಎಂಬ ನಂಬಿಕೆ ನನಗಿದೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ನಿಮ್ಮ ಪತಿಯನ್ನು ಪ್ರೀತಿಸುತ್ತೇನೆ. ನಿಮ್ಮ ಕುಟುಂಬವನ್ನು ಪ್ರೀತಿಸುತ್ತೇನೆ ಎಂದು ಹೇಳಿದರು.