ಬೆಂಗಳೂರು ಡಿಸೆಂಬರ್ 30: ಕನ್ನಡ ತಮಿಳು ಕಿರುತೆರೆಯಲ್ಲಿ ನಟಿಸುತ್ತಿದ್ದ ಖ್ಯಾತ ನಟಿ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಅವರ ಸಾವಿಗೆ ಕಾರಣ ಬಹಿರಂಗವಾಗಿದ್ದು, ಡೆತ್ ನೋಟ್ ನಲ್ಲಿ ಸಾವಿಗೆ ಕಾರಣ ಎನೆಂದು ತಿಳಿಸಿದ್ದಾರೆ.


ಮೂಲತಃ ಬಳ್ಳಾರಿ ಜಿಲ್ಲೆ ಕೊಟ್ಟೂರಿನವರಾದ ನಂದಿನಿ, ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡ ಮಾತ್ರವಲ್ಲ, ತಮಿಳು ಧಾರಾವಾಹಿಗಳಲ್ಲೂ ನಟಿಸಿದ್ದರು. ಪ್ರಸ್ತುತ ತಮಿಳಿನ ಗೌರಿ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ಅಭಿನಯಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಕನಕ ಹಾಗೂ ದುರ್ಗಾ ಎನ್ನುವ ದ್ವಿಪಾತ್ರದಲ್ಲಿ ನಟಿಸುತ್ತಿದ್ದರು.
ಕನ್ನಡ, ತೆಲುಗು ಮತ್ತು ತಮಿಳು ಕಿರುತರೆಯಲ್ಲಿ ಮಿಂಚುತ್ತಿದ್ದ ನಟಿ ನಂದಿನಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವೃತ್ತಿಜೀವನದಲ್ಲಿ ಸಕ್ರಿಯರಾಗಿದ್ದ ನಂದಿನಿ ಸರ್ಕಾರಿ ಕೆಲಸಕ್ಕೆ ಒತ್ತಾಯಿಸುತ್ತಿದ್ದ ಹಿನ್ನೆಲೆ ಮೃತಪಟ್ಟಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಂದಿನಿ ತಂದೆ ಸರ್ಕಾರಿ ಶಿಕ್ಷಕರಾಗಿದ್ದರು. ಮೂರು ವರ್ಷಗಳ ಹಿಂದೆ ಅವರು ನಿಧನರಾಗಿದ್ದರು. ತಂದೆಯ ಕೆಲಸವನ್ನು ಮಾಡುವಂತೆ ಕುಟುಂಬಸ್ಥರಿಂದ ಒತ್ತಾಯ ಇತ್ತು. ಆದರೆ ಟೀಚರ್ ಕೆಲಸ ನಂದಿನಿಗೆ ಇಷ್ಟವಿರಲಿಲ್ಲ. ಅಲ್ಲದೇ ಕೆಲ ಅನಾರೋಗ್ಯ ಸಮಸ್ಯೆಯಿಂದ ನಂದಿನಿದ್ದರು ಎಂದು ತಿಳಿದುಬಂದಿದೆ.

2025ರ ಆಗಸ್ಟ್‌ನಿಂದ ಮೈಲಸಂದ್ರದ ಪಿಜಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ತನ್ನ ಗೆಳೆಯ ಪುನೀತ್‌ ಎಂಬುವವರ ಮನೆಗೆ ಹೋಗಿ ರಾತ್ರಿ 11.50ರ ಸುಮಾರಿಗೆ ವಾಪಸ್‌ ಬಂದಿದ್ದರು. ಪುನಃ ಪುನೀತ್‌ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪುನೀತ್‌, ಪಿಜಿ ಮ್ಯಾನೇಜರ್‌ಗೆ ತಿಳಿಸಿದ್ದರು. ಪಿಜಿ ಮ್ಯಾನೇಜರ್‌ ಹಾಗೂ ಸಿಬ್ಬಂದಿ ನಂದಿನಿ ಕೊಠಡಿ ಬಳಿ ತೆರಳಿ ನೋಡಿದಾಗ ವೇಲ್‌ನಿಂದ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂದಿನಿ ಅವರು ಡೈರಿಯಲ್ಲಿ ಡೆತ್‌ನೋಟ್‌ ಬರೆದಿರುವುದು ಕಂಡು ಬಂದಿದೆ. ನನಗೆ ಸರಕಾರಿ ಕೆಲಸ ಇಷ್ಟವಿಲ್ಲ. ನಟನೆ ಬಗ್ಗೆ ಆಸಕ್ತಿಯಿದ್ದು, ಅದರಲ್ಲಿಯೇ ಮುಂದುವರಿಯಬೇಕು. ಆದರೆ, ಮನೆಯವರು ಇದಕ್ಕೆ ಒಪ್ಪುತ್ತಿಲ್ಲ ಎಂದು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Share Information