ಉಡುಪಿ, ಮೇ 06: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಅಂಬಲಪಾಡಿಯ ದೇವಳದ ಭವಾನಿ ಮಂಟಪದಲ್ಲಿ ನಡೆಯಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಮರ್ಕಂಜ ಗ್ರಾಮದ ರೆಂಜಾಳ ರಾಮಕೃಷ್ಣ ರಾವ್ ರವರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಉಡುಪಿಯ ಅಂಬಲಪಾಡಿ ದೇವಳದಲ್ಲಿ ನಡೆಯಿತು. ರಾಮಕೃಷ್ಣ ರಾವ್ ದಂಪತಿಗಳು ಪ್ರಶಸ್ತಿ ಸ್ವೀಕರಿಸಿದರು.
ಶ್ರೀ ರೆಂಜಾಳ ರಾಮಕೃಷ್ಣರವರು ಶ್ರೀ ವೆಂಕಟರಮಣ ಮತ್ತು ಯಮುನಮ್ಮ ಇವರ ಮಗನಾಗಿ ದಿನಾಂಕ: 19/05/1944ರಂದು ಜನಿಸಿದ್ದು, 9ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಯಕ್ಷಗಾನ ಆಟ ಕೂಟಗಳ ವಾತಾವರಣಗಳಿಂದ ಪ್ರಭಾವಿತರಾದ ಇವರು ಬಳಿಕ ಕುದ್ದಾಡಿ ವಿಶ್ವನಾಥ ರೈ ರವರಿಂದ ಭರತನಾಟ್ಯದ ಬಾಲಪಾಠ ಕಲಿತು 4 ವರ್ಷ ಮಡಿಕೇರಿಯ ಚೌಡೇಶ್ವರಿ ಮೇಳದಲ್ಲಿ ತಿರುಗಾಟ ಮಾಡಿರುತ್ತಾರೆ. ಇವರ ನೆಚ್ಚಿನ ಪಾತ್ರಗಳು ರಕ್ತಬೀಜ, ಹಿರಣ್ಯಾಕ್ಷ, ಇಂದ್ರಜಿತು, ಕೌಂಡ್ಲಿಕ, ನಳ, ಹರಿಶ್ಚಂದ್ರ, ದೇವೇಂದ್ರ, ಅರ್ಜುನ, ಸ್ತ್ರೀ ವೇಷದಲ್ಲಿ ಶ್ರೀದೇವಿ, ಸುಭದ್ರ, ದಮಯಂತಿ, ಕೊರವಂಜಿ, ಶಶಿಪ್ರಭೆ, ವಿದೂಷಕನಾಗಿ ಬಾಹುಕ, ವಿಜಯ, ಪಂಡಿತ, ಮಕರಂದ ಪಾತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇವರದ್ದು.
ಮಡಿಕೇರಿ ಮೇಳಗಳಲ್ಲಿ 5 ವರ್ಷ, ಹವ್ಯಾಸಿಯಾಗಿ 3 ವರ್ಷ ಅನುಭವ ಹೊಂದಿರುತ್ತಾರೆ. ಕಟೀಲು ಗೋಪಾಲಕೃಷ್ಣ ಪ್ರಶಸ್ತಿ, ಸುಳ್ಯ ತಾಲೂಕು ಕನ್ನಡ ಸಿರಿ ಪ್ರಶಸ್ತಿ, ಮುಚೂರು ನಾರಾಯಣ ಭಟ್ ಮತ್ತು ಮುಚೂರು ಶಾಮಣ್ಣ ಪ್ರಶಸ್ತಿ, ಸುಳ್ಯ ರಂಗಮನೆ ಪ್ರಶಸ್ತಿಗಳನ್ನು ಗಳಿಸಿದ ಇವರು ಸುಮಾರು 40 ವರ್ಷಗಳ ಕಾಲ ಶ್ರೀ ಕಟೀಲು ಮೇಳದ ಪ್ರದಾನ ಕಲಾವಿದರಲ್ಲೊಬ್ಬರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾಗಿರುತ್ತಾರೆ. ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿ ಗೌರವಿಸಿವೆ.
ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್, ಕಟೀಲು ದೇವಳದ ಹರಿನಾರಾಯಣ ಆಸ್ರಣ್ಣ, ಅಂಬಲಪಾಡಿ ದೇವಳದ ಅನುವಂಶಿಕ ಮೊಕೇನರ ಡಾ.ವಿಜಯ ಬಲ್ಲಾಳ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸೇರಿದಂತೆ ಹಲವು ಗಣ್ಯರ ಉಪಸ್ಥಿತರಿದ್ದರು.