LATEST NEWS
ಹಿಜಬ್ ವಿವಾದದ ನಡುವೆ ಶಾಂತಿಯುತವಾಗಿ ಪುನರಾರಂಭವಾದ ಪ್ರೌಢಶಾಲೆಗಳು….!!
ಉಡುಪಿ ಫೆಬ್ರವರಿ 14: ಇಡೀ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹಿಜಬ್ ಪ್ರಕರಣದಿಂದಾಗಿ ಬಂದ್ ಆಗಿದ್ದ ಶಾಲೆಗಳು ಇಂದು ಪುನರಾರಂಭಗೊಂಡಿದೆ. ಹಿಜಬ್ ವಿವಾದ ಘರ್ಷಣೆಗೆ ತಿರುಗಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ವಾರದಿಂದ 9ನೇ ತರಗತಿಯಿಂದ ಹೈಸ್ಕೂಲ್, ಕಾಲೇಜು, ವೃತ್ತಿಪರ ಕೋರ್ಸ್ ಗಳ ಕಾಲೇಜುಗಳಿಗೆ ರಜೆ ಘೋಷಿಸಿತ್ತು.
ಆದರೆ ಹೈಕೋರ್ಟ್ ಆದೇಶದ ಮೇರೆ ರಾಜ್ಯ ಸರಕಾರ ಇಂದು ಪ್ರೌಢಶಾಲೆಗಳನ್ನು ಪುನರಾರಂಭಿಸಿದ್ದು, ಪೊಲೀಸ್ ಮತ್ತು ಅಧಿಕಾರಿಗಳ ಬಿಗಿ ಬಂದೋಬಸ್ತ್, ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಪುನಾರಂಭವಾಗುತ್ತಿದೆ. ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ಹಿಜಾಬ್-ಕೇಸರಿ ಶಾಲು ಕುರಿತು ಮತ್ತೆ ವಿವಾದ ಭುಗಿಲೇಳಬಹುದು ಎಂಬ ಆತಂಕವಿದ್ದು ಹೀಗಾಗಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರುವಂತೆ ಸಿಎಂ ಈಗಾಗಲೇ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿರುವ ಶಾಲೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಶಾಲೆಗಳ ಸುತ್ತಮುತ್ತ ಮಕ್ಕಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಅನಗತ್ಯ ಚರ್ಚೆ, ಪ್ರಚೋದನಾಕಾರಿ ಮಾತುಗಳನ್ನು ಹೊರಗೆ ಓಡಾಡುವಾಗ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವಂತಿಲ್ಲ ಎಂದು ಪೊಲೀಸರು ಮತ್ತು ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ
You must be logged in to post a comment Login