ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರ ಸಚಿವ ಸಂಪುಟದಲ್ಲಿ 29 ವರ್ಷದ ಎಸ್. ಕೀರ್ತನಾ ಅವರು ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದ್ದಾರೆ. ರಾಜ್ಯದ ಅತ್ಯಂತ ಕಿರಿಯ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿರುವ ಇವರು, ರಾಜಕೀಯ ತಂತ್ರಗಾರ್ತಿಯಾಗಿ ತೆರೆಮರೆಯಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಈಗ ನೇರವಾಗಿ ಆಡಳಿತದ ಅಖಾಡಕ್ಕೆ ಇಳಿದಿದ್ದಾರೆ.

‘ಭಾರತದ ಪಟಾಕಿ ರಾಜಧಾನಿ’ ಎಂದೇ ಖ್ಯಾತಿಯಾದ ಶಿವಕಾಶಿ ಕ್ಷೇತ್ರದಲ್ಲಿ ಕಳೆದ ಏಳು ದಶಕಗಳಿಂದ ಪುರುಷರದ್ದೇ ಮೇಲುಗೈ ಇತ್ತು. ಆದರೆ, ಈ ಬಾರಿ ಟಿವಿಕೆ (TVK) ಪಕ್ಷದಿಂದ ಸ್ಪರ್ಧಿಸಿದ್ದ ಕೀರ್ತನಾ ಅವರು ಆ ಕ್ಷೇತ್ರದಲ್ಲಿ ಗೆದ್ದ ಮೊದಲ ಮಹಿಳಾ ಶಾಸಕಿ ಎಂಬ ಇತಿಹಾಸ ಬರೆದಿದ್ದಾರೆ. ತಮಿಳು ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿ, ಇಂದು ಉನ್ನತ ಸ್ಥಾನಕ್ಕೇರಿರುವುದು ಅವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಸ್ನಾತಕೋತ್ತರ ಪದವಿ ಪಡೆದಿರುವ ಕೀರ್ತನಾ ಅವರು ಕೇವಲ ನಟ ವಿಜಯ್ ಅವರ ಅಭಿಮಾನಿಯಲ್ಲ; ಬದಲಾಗಿ ರಾಜಕೀಯದಲ್ಲಿ ಆಳವಾದ ಜ್ಞಾನವುಳ್ಳ ತಂತ್ರಗಾರ್ತಿ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಘಟಾನುಘಟಿ ನಾಯಕರಿಗೆ ರಾಜಕೀಯ ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಮತ್ತು ಯುವಜನತೆಯನ್ನು ಪಕ್ಷದತ್ತ ಸೆಳೆಯುವಲ್ಲಿ ಇವರು ಪಳಗಿದ್ದಾರೆ.
ತಮಿಳುನಾಡಿನಲ್ಲಿ ಹಿಂದಿ ಭಾಷೆಯ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಕೀರ್ತನಾ ಅವರು ಹಿಂದಿಯಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಾಷ್ಟ್ರಮಟ್ಟದ ನಾಯಕರಿಗೆ ತಮ್ಮ ವಿಚಾರಗಳು ತಲುಪಬೇಕು ಎಂಬ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿರುವುದು ಅವರ ಮುತ್ಸದ್ದಿತನವನ್ನು ಎತ್ತಿ ತೋರಿಸುತ್ತದೆ. 120 ಶಾಸಕರ ಬೆಂಬಲದೊಂದಿಗೆ (ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಮೈತ್ರಿ) ಅಸ್ತಿತ್ವಕ್ಕೆ ಬಂದಿರುವ ಈ ಸಂಪುಟದಲ್ಲಿ, ಕೀರ್ತನಾ ಅವರು ಯುವಜನತೆ ಮತ್ತು ಮಹಿಳೆಯರ ಧ್ವನಿಯಾಗಿ ಹೇಗೆ ಕೆಲಸ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.