LATEST NEWS
ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಿದ್ದಕ್ಕೆ ಬಿರುಕು ಬಿಟ್ಟ ₹1.16 ಕೋಟಿ ವೆಚ್ಚದ ರಸ್ತೆ
ಲಖನೌ: ಉತ್ತರದ ಪ್ರದೇಶದ ರಸ್ತೆಯೊಂದು ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಿದ್ದಕ್ಕೆ ಹಾನಿಯಾದ ಘಟನೆ ಬಿಜನೋರ್ ಸದಾರ್ ಎಂಬಲ್ಲಿ ನಡೆದಿದೆ. ಉದ್ಘಾಟನೆಗೆ ಬಂದಿದ್ದ ಬಿಜನೋರ್ ಸದಾರ್ ಕ್ಷೇತ್ರದ ಬಿಜೆಪಿ ಶಾಸಕಿ ಸುಚಿ ಮೌಸಮ್ ಚೌಧರಿ ಉದ್ಘಾಟನೆ ವೇಳೆ ಸಾಂಪ್ರದಾಯಿಕವಾಗಿ ತೆಂಗಿನಕಾಯಿ ಒಡೆದಾಗ ಅದು ಹೋಳಾಗದೆ ರಸ್ತೆಗೇ ಹಾನಿಯಾದ ಘಟನೆ ನಡೆದಿದೆ. ಸುಮಾರು ₹1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 7 ಕಿ.ಮೀ. ರಸ್ತೆ ಇದಾಗಿದ್ದು. ಉತ್ತರ ಪ್ರದೇಶದ ನೀರಾವರಿ ವಿಭಾಗದಿಂದ ಈ ರಸ್ತೆ ನಿರ್ಮಾಣವಾಗಿದೆ.
ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ, ಕಾರಣೀಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ‘ನೀರಾವರಿ ವಿಭಾಗದಿಂದ ₹1.16 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. 7 ಕಿ.ಮೀ ಉದ್ದದ ರಸ್ತೆಯನ್ನು ಉದ್ಘಾಟಿಸಲು ನನ್ನನ್ನು ಆಹ್ವಾನಿಸಿದ್ದರು. ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಅದು ಹೋಳಾಗುವ ಬದಲು ರಸ್ತೆಗೇ ಹಾನಿಯಾಗಿದ್ದು ಕಂಡುಬಂತು. ರಸ್ತೆಯ ಮೇಲ್ಭಾಗ ಕಿತ್ತುಬಂತು’ ಎಂದು ಶಾಸಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪರಿಶೀಲಿಸಿದಾಗ ಕಳಪೆ ಕಾಮಗಾರಿ ಎಂದು ತಿಳಿದುಬಂತು. ರಸ್ತೆ ಕೆಲಸ ಸರಿಯಾಗಿ ಪೂರ್ಣಗೊಂಡಿರಲಿಲ್ಲ. ಉದ್ಘಾಟನೆ ಕಾರ್ಯಕ್ರಮವನ್ನು ನಿಲ್ಲಿಸಿದೆವು. ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆ ಮಾತನಾಡಿದಾಗ ಮೂವರು ಸದಸ್ಯರುಳ್ಳ ತಂಡವನ್ನು ಪರಿಶೀಲನೆಗೆ ಕಳುಹಿಸಿದರು.
ರಸ್ತೆಯ ಮಾದರಿಯನ್ನು ಹೆಚ್ಚಿನ ತನಿಖೆಗೆ ಕಳಿಸಲಾಗಿದೆ. ಸುಮಾರು 3 ಗಂಟೆಗಳ ಕಾಲ ಸ್ಥಳದಲ್ಲೇ ಇದ್ದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಚೌಧರಿ ಭರವಸೆ ನೀಡಿದರು. ಹೆಚ್ಚುವರಿ ಪರಿಶೀಲನೆಗೆ ರಸ್ತೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ನಿರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಕಾಸ್ ಅಗರ್ವಾಲ್ ತಿಳಿಸಿದ್ದಾರೆ.
You must be logged in to post a comment Login