LATEST NEWS
ರಸ್ತೆ ಅತಿಕ್ರಮಿಸಿ ಕಟ್ಟಡ – ಉಳ್ಳಾಲ ಪೌರಾಯುಕ್ತರಿಂದ ತೆರವು
ರಸ್ತೆ ಅತಿಕ್ರಮಿಸಿ ಕಟ್ಟಡ – ಉಳ್ಳಾಲ ಪೌರಾಯುಕ್ತರಿಂದ ತೆರವು
ಮಂಗಳೂರು ಜೂನ್ 4 : ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಕಟ್ಟಡ ನಿರ್ಮಿಸಲು ಯತ್ನಿಸಿದ್ದನ್ನು ಉಳ್ಳಾಲ ನಗರಸಭಾ ಆಯುಕ್ತರು ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ತೊಕ್ಕೊಟ್ಟಿನ ಚೆಂಬುಗುಡ್ಡೆಯಲ್ಲಿ ನಡೆದಿದೆ.
ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬುಗುಡ್ಡೆ ದಲಿತ ಕಾಲೊನಿ ಬಳಿ ಸರ್ವೇ ನಂಬರ್ 102 ರ ಸರಕಾರಿ ಜಮೀನಿನಲ್ಲಿ ನೆಲೆಸಿರುವ ಆಯಿಷಾ ಮತ್ತು ಮಹಮ್ಮದ್ ಇಸ್ಮಾಯಿಲ್ ದಂಪತಿ, ರಸ್ತೆಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. 24 ಅಡಿ ಅಗಲದ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ನಡೆಸಿ ಶೆಡ್ ಕಟ್ಟಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಈ ಬಗ್ಗೆ ಉಳ್ಳಾಲ ನಗರಸಭೆಗೆ ಸ್ಥಳೀಯರು ಲಿಖಿತ ದೂರು ನೀಡಿದ್ದರು. ಗುರುವಾರ ಸ್ಥಳಕ್ಕೆ ಆಗಮಿಸಿದ ನಗರಸಭೆ ಸಹಾಯಕ ಅಭಿಯಂತರ ವಿನೋದ್, ಪೊಲೀಸರ ಭದ್ರತೆಯಲ್ಲಿ ಜೆಸಿಬಿ ಮೂಲಕ ಅಕ್ರಮ ಶೆಡ್ಡನ್ನು ತೆರವುಗೊಳಿಸಿದ್ದಾರೆ.
ಮಹಮ್ಮದ್ ಇಸ್ಮಾಯಿಲ್, ಇತ್ತೀಚೆಗೆ ಲಾಕ್ ಡೌನ್ ಸಮಯದಲ್ಲಿ ತನ್ನ ಮನೆ ಸಮೀಪದ ಸರಕಾರಿ ಜಮೀನಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಕಟ್ಟಡ ಕಾಮಗಾರಿ ನಡೆಸುತ್ತಿರುವ ವೇಳೆ ಪೌರಾಯುಕ್ತ ರಾಯಪ್ಪ ಪೊಲೀಸರಿಂದ ದಾಳಿ ನಡೆಸಿ ಕಾಮಗಾರಿಗೆ ತಡೆ ನೀಡಿದ್ದರು. ಈ ಬಗ್ಗೆ ಮಹಮ್ಮದ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ತನ್ನ ವಿರುದ್ಧ ದೂರು ನೀಡುವ ನಿವಾಸಿಗಳನ್ನು ಮಹಮ್ಮದ್ ಬೆದರಿಸುತ್ತಿದ್ದ ಆರೋಪಗಳನ್ನೂ ಸ್ಥಳೀಯರು ಮಾಡುತ್ತಾರೆ. ಇದೀಗ ಅತಿಕ್ರಮಣದ ವಿರುದ್ಧ ಪೌರಾಯುಕ್ತರು ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
You must be logged in to post a comment Login