ದಾವಣಗೆರೆ, ಜೂನ್ 22: ಕ್ಯಾನ್ಸರ್ನಿಂದ ಬಳಲುತ್ತಿರುವ ದಾವಣಗೆರೆಯ ನಿವೃತ್ತ ಶಿಕ್ಷಕಿ ಕರಿಬಸಮ್ಮ (86) ಅವರು ಭಾರತೀಯ ಸೇನೆಗೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ವೃದ್ದಾಶ್ರಮದಲ್ಲಿ ಕರಿಬಸಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರು ದೇಶದ ಯೋಧರಿಗಾಗಿ ಏನಾದರೂ ಒಂದೊಳ್ಳೆ ಕೆಲಸ ಮಾಡಬೇಕು ಎಂಬ ಸಂಕಲ್ಪ ಹೊಂದಿದ್ದರು. ಮನೆ ಮಾರಾಟ ಮಾಡಿದ ಹಣ, ಪಿಂಚಣಿಯ ಹಣ ಬ್ಯಾಂಕ್ನಲ್ಲಿ ಇರಿಸಿ, ಬರೋಬ್ಬರಿ ಹತ್ತು ಲಕ್ಷ ರೂಪಾಯಿಯನ್ನು ʻಭಾರತ್ ಕೀ ವೀರ್’ (Bharat Ke Veer) ನಿಧಿಗೆ ಅರ್ಪಿಸಿದ್ದಾರೆ. ಚೆಕ್ನ್ನು ಯೋಧರ ನಿಧಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಜಿಎಂ ಅವರ ಕೈಗೆ ನೀಡಿದ್ದಾರೆ.
ಐವತ್ತು ವರ್ಷಗಳ ಹಿಂದೆ ಅವರು ದೇಣಿಗೆ ನೀಡಬೇಕು ಎಂದುಕೊಂಡಿದ್ದರು. ಈಗ ಅವರ ಬಯಕೆ ಈಡೇರಿದೆ. ಅಜ್ಜಿಯ ವಿನೂತನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೆ ಕರಿಬಸಮ್ಮ ಅವರು ಯುವ ಜನರಿಗೆ ದೇಶ ಪ್ರೇಮದ ಪಾಠ ಮಾಡಿದ್ದಾರೆ. ಅವರು ಬಿಪಿ, ಶುಗರ್, ಸ್ಲಿಪ್ ಡಿಸ್ಕ್, ಕ್ಯಾನ್ಸರ್ ನಿಂದ ಬಳಲುತ್ತಿದ್ದು, ದಯಾಮರಣ ಹೋರಾಟಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಕರಿಬಸಮ್ಮ ಅವರು, ಐವತ್ತು ವರ್ಷಗಳ ಹಿಂದಿನ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಈ ಡಿಫೇನ್ಸ್ ಗೆ ಹಣ ನೀಡಿದ್ದೇನೆ. ಯೋಧರು ಕಡಿದಾದ ಬೆಟ್ಟ ಗುಡ್ಡಗಳಲ್ಲಿ ಕೆಲಸ ಮಾಡ್ತಾರೆ. ಅಲ್ಲದೆ ಹೆಂಡತಿ ಮಕ್ಕಳು ವಯಸ್ಸಾಯದ ಪೋಷಕರನ್ನು ಬಿಟ್ಟು ಹೋಗಿ ದೇಶ ಕಾಯ್ತಾರೆ. ನಾನು ದೇಶಕ್ಕೆ ಏನಾದರೂ ಮಾಡ್ಬೇಕು ಎಂಬ ಭಾವನೆ ಬಂತು. ಅದು ಪ್ರಶ್ನೆಯಾಗಿಯೇ ಉಳಿಯಿತು. ಅದಕ್ಕಾಗಿ ನಾನು ಮನೆ ಮಾರಾಟ ಮಾಡಿದ ಹಣ ನೀಡಲು ನಿರ್ಧಾರ ಮಾಡಿದೆ.
ದಯಾಮರಣಕ್ಕಾಗಿ ಹೋರಾಟ ಮಾಡಿದ ಏಕೈಕ ಮಹಿಳೆ ನಾನು, ಈ ಹೋರಾಟ ಮಾಡುವ ವೇಳೆ ನನಗೆ ಬಿಪಿ, ಶುಗರ್, ಸ್ಲಿಪ್ ಡಿಸ್ಕ್, ಕ್ಯಾನ್ ಕ್ಯಾನ್ಸರ್ ಬಂತು. ಮನೆ ಮಾರಿದ 6 ಲಕ್ಷ ಹಣವನ್ನು ಬಿಎಸ್ಎಫ್ ನಿಧಿಗಾಗಿ ಮೀಸಲಿಟ್ಟಿದ್ದೆ. ಇದೀಗ ಆರು ಲಕ್ಷ ರೂಪಾಯಿ ಸಂಪೂರ್ಣವಾಗಿ 10 ಲಕ್ಷ ಆಗಿದೆ. ಅ ಹಣವನ್ನು ದೇಶಕ್ಕಾಗಿ ಕೊಟ್ಟಿದ್ದೇನೆ. ಆರೋಗ್ಯದಲ್ಲಿ ಏರುಪೇರು ಆಗ್ತಿರುತ್ತದೆ ಅ ಕಾರಣ ಜಿಲ್ಲಾಧಿಕಾರಿಗಳಾದ ಡಾ. ಗಂಗಾಧರಸ್ವಾಮಿ ಜಿಎಂ ಅವರ ಮುಖಾಂತರ ತಲುಪಿಸಿದ್ದೇನೆ ಎಂದು ತಿಳಿಸಿದರು