ನವದೆಹಲಿ ಎಪ್ರಿಲ್ 23: ಧಾರ್ಮಿಕ ನಂಬಿಕೆ ಮತ್ತು ಸಾಂವಿಧಾನಿಕ ಹಕ್ಕುಗಳ ಕುರಿತಾದ ಶಬರಿಮಲೆ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಾಧೀಶರ ಪೀಠದಲ್ಲಿ ಬುಧವಾರ ಒಂದು ನಗುವಿನ ಕ್ಷಣ ಕಂಡುಬಂದಿತು. “ಜ್ಞಾನವು ಎಲ್ಲಿಂದ ಬಂದರೂ ಸ್ವೀಕರಿಸಬೇಕು” ಎಂಬ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ, “ಆದರೆ ವಾಟ್ಸಾಪ್ ವಿಶ್ವವಿದ್ಯಾಲಯದಿಂದ ಅಲ್ಲ” ಎಂದು ಹೇಳುವ ಮೂಲಕ ನ್ಯಾಯಾಲಯದಲ್ಲಿ ನಗು ಮೂಡಿಸಿದರು.

ದಾವೂದಿ ಬೊಹ್ರಾ ಸಮುದಾಯದ ಪರ ಹಾಜರಿದ್ದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಲೇಖನವೊಂದನ್ನು ಉಲ್ಲೇಖಿಸಿ, “ಜ್ಞಾನವು ಯಾವುದೇ ಮೂಲದಿಂದ ಬರಲಿ ಅದನ್ನು ಸ್ವೀಕರಿಸಬೇಕು” ಎಂದು ವಾದಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ನಾವು ಪ್ರಖ್ಯಾತ ಚಿಂತಕರನ್ನು ಗೌರವಿಸುತ್ತೇವೆ, ಆದರೆ ಅವರ ಬರಹಗಳು ಕೇವಲ ‘ವೈಯಕ್ತಿಕ ಅಭಿಪ್ರಾಯ’ಗಳಷ್ಟೇ. ಅವು ನ್ಯಾಯಾಂಗ ನಿರ್ಧಾರಗಳ ಮೇಲೆ ಬದ್ಧತೆ ಹೊಂದಿರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ವಕೀಲ ಕೌಲ್ ಅವರು “ಯಾವುದೇ ವಿಶ್ವವಿದ್ಯಾಲಯದಿಂದ ಮಾಹಿತಿ ಬಂದರೂ ಸ್ವಾಗತಿಸಬೇಕು” ಎಂದಾಗ, ನ್ಯಾಯಮೂರ್ತಿ ನಾಗರತ್ನ ಅವರು “ವಾಟ್ಸಾಪ್ ಯೂನಿವರ್ಸಿಟಿ ಮಾಹಿತಿ ಬೇಡ ಎಂದು ಮಾರ್ಮಿಕವಾಗಿ ಟೀಕಿಸಿದರು. ಇಂದಿನ ಕಾಲದಲ್ಲಿ ಹರಿದಾಡುವ ಅರೆಬರೆ ಮತ್ತು ಅಧಿಕೃತವಲ್ಲದ ಮಾಹಿತಿಗಳ ಬಗ್ಗೆ ಅವರು ಈ ಮೂಲಕ ಎಚ್ಚರಿಸಿದರು.
ವಿಚಾರಣೆಯ ವೇಳೆ ‘ನೈತಿಕತೆ’ ಎಂಬ ಪದದ ಅರ್ಥದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. 25 ಮತ್ತು 26ನೇ ವಿಧಿಗಳಲ್ಲಿರುವ ‘ನೈತಿಕತೆ’ ಎಂಬ ಪದವನ್ನು “ಸಾಂವಿಧಾನಿಕ ನೈತಿಕತೆ” ಎಂದು ಅರ್ಥೈಸಬಾರದು ಎಂದು ಕೌಲ್ ವಾದಿಸಿದರು. “ಸಾಂವಿಧಾನಿಕ ನೈತಿಕತೆಯನ್ನು ಇದರೊಳಗೆ ತಂದರೆ ನಾವು ಊಹಿಸಿದ್ದಕ್ಕಿಂತ ಹೆಚ್ಚಿನದನ್ನು ಆಮದು ಮಾಡಿಕೊಂಡಂತಾಗುತ್ತದೆ” ಎಂದು ಅವರು ಎಚ್ಚರಿಸಿದರು.
ಯಾವುದೇ ಒಂದು ಧಾರ್ಮಿಕ ಆಚರಣೆಯು ಆ ಧರ್ಮಕ್ಕೆ “ಅಗತ್ಯ ಮತ್ತು ಅನಿವಾರ್ಯ”ವೇ ಎಂಬುದನ್ನು ನಿರ್ಧರಿಸಲು ನ್ಯಾಯಾಂಗವು ಮಾನದಂಡಗಳನ್ನು ರೂಪಿಸುವುದು ಅತ್ಯಂತ ಕಷ್ಟಕರ ಕೆಲಸ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.
ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಧಾರ್ಮಿಕ ಹಕ್ಕುಗಳನ್ನು ಚಲಾಯಿಸಬೇಕಾಗುತ್ತದೆ. ಸಾಮಾಜಿಕ ಸುಧಾರಣಾ ಕಾನೂನುಗಳು ಎಲ್ಲಾ ಪ್ರಕರಣಗಳಲ್ಲಿ ಧಾರ್ಮಿಕ ಪಂಗಡದ ಹಕ್ಕುಗಳಿಂದ ಅತಿಕ್ರಮಿಸಲ್ಪಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಗಮನಿಸಿದರು.