ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಎನ್ನಲಾದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆಯ ಬೆನ್ನಲ್ಲೇ ಸಿನಿಮಾದ ಕುರಿತು ಹಲವು ರೋಚಕ ಸಂಗತಿಗಳು ಬಹಿರಂಗವಾಗಿವೆ. ಏಪ್ರಿಲ್ 2ರಂದು ಬಿಡುಗಡೆಯಾದ ಟೀಸರ್ ಕೇವಲ ದೃಶ್ಯ ವೈಭವದಿಂದ ಮಾತ್ರವಲ್ಲದೆ, ನಾಯಕ ನಟ ರಣಬೀರ್ ಕಪೂರ್ ಅವರ ದ್ವಿಪಾತ್ರದ ವಿಚಾರದಿಂದಾಗಿ ಇಡೀ ಚಿತ್ರರಂಗದ ಗಮನ ಸೆಳೆದಿದೆ. ಈ ಚಿತ್ರದಲ್ಲಿ ರಣಬೀರ್ ಅವರು ಕೇವಲ ಶ್ರೀರಾಮನ ಪಾತ್ರಕ್ಕೆ ಸೀಮಿತವಾಗದೆ, ವಿಷ್ಣುವಿನ ಮತ್ತೊಂದು ಪ್ರಮುಖ ಅವತಾರವಾದ ಪರಶುರಾಮನಾಗಿಯೂ ಕಾಣಿಸಿಕೊಳ್ಳುತ್ತಿರುವುದು ಈಗಿನ ದೊಡ್ಡ ಅಪ್ಡೇಟ್ ಆಗಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಣಬೀರ್ ಕಪೂರ್, ಭಗವಾನ್ ವಿಷ್ಣುವಿನ ಅವತಾರಗಳಾದ ಶ್ರೀರಾಮ ಮತ್ತು ಪರಶುರಾಮ ಈ ಇಬ್ಬರ ಪಾತ್ರಗಳಲ್ಲಿ ನಟಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಹೇಳಿಕೊಂಡಿದ್ದಾರೆ. ಶ್ರೀರಾಮನಿಗಿಂತ ಮುಂಚಿನ ಅವತಾರವಾದ ಪರಶುರಾಮನ ಪಾತ್ರವನ್ನು ಸಿನಿಮಾದಲ್ಲಿ ಅಳವಡಿಸಲು ಚಿತ್ರತಂಡ ಸುಮಾರು ಒಂದು ವರ್ಷದಿಂದ ತಾಂತ್ರಿಕವಾಗಿ ತಯಾರಿ ನಡೆಸಿದೆ. ಈ ದ್ವಿಪಾತ್ರಗಳ ನಡುವೆ ವ್ಯತ್ಯಾಸ ತೋರಿಸಲು ರಣಬೀರ್ ಅವರು ತಮ್ಮ ಧ್ವನಿ ಹಾಗೂ ದೇಹಭಾಷೆಯಲ್ಲಿ ವಿಶೇಷ ಬದಲಾವಣೆ ಮಾಡಿಕೊಂಡಿರುವುದು ಟೀಸರ್ನಲ್ಲಿ ಎದ್ದು ಕಾಣುತ್ತಿದೆ.
ಈ ಅದ್ದೂರಿ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಜಾಗತಿಕ ದೃಶ್ಯ ವೈಭವದ ಸಂಸ್ಥೆ ಡಿಎನ್ಇಜಿ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಬಂಡವಾಳ ಹೂಡುತ್ತಿವೆ. ಚಿತ್ರದ ತಾರಾಗಣದಲ್ಲಿ ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ನಟಿಸುತ್ತಿದ್ದು, ದಶರಥ ಮಹಾರಾಜನ ಪಾತ್ರದಲ್ಲಿ ಅರುಣ್ ಗೋವಿಲ್ ಕಾಣಿಸಿಕೊಳ್ಳಲಿದ್ದಾರೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಜುಗಲ್ಬಂದಿ ಚಿತ್ರಕ್ಕೆ ಅಂತರಾಷ್ಟ್ರೀಯ ಸ್ಪರ್ಶ ನೀಡಿದೆ.
ಸುಮಾರು 1,600 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಚಿತ್ರತಂಡದ ಅಧಿಕೃತ ಪ್ರಕಟಣೆಯಂತೆ ‘ರಾಮಾಯಣ: ಭಾಗ 1’ ಚಿತ್ರವು 2026ರ ದೀಪಾವಳಿ ಹಬ್ಬದಂದು ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಇದರ ಮುಂದುವರಿದ ಭಾಗವಾದ ಎರಡನೇ ಚಿತ್ರವು 2027ರ ದೀಪಾವಳಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಒಟ್ಟು 6 ಗಂಟೆಗಳ ಸುದೀರ್ಘ ಕಥಾಹಂದರ ಹೊಂದಿರುವ ಈ ಸಿನಿಮಾ ಐಮ್ಯಾಕ್ಸ್ ಪರದೆಗಳ ಮೇಲೆ ಕಣ್ಮನ ಸೆಳೆಯಲು ಸಜ್ಜಾಗುತ್ತಿದೆ.