ಪುತ್ತೂರು ಸೆಪ್ಟೆಂಬರ್ 23: ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡ ವ್ಯಕ್ತಿಯನ್ನು ವೈದ್ಯರು ಬರೋಬ್ಬರಿ 90 ಇಂಜೆಕ್ಷನ್ ನೀಡಿ ಬದುಕಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪುತ್ತೂರಿನ ಗೋಳಿತ್ತೊಟ್ಟಿನ ಶಾಂತಿನಗರ ನಿವಾಸಿ ಶೀನಪ್ಪ ಗೌಡ(63) ಎಂಬವರು ಬೆಳಗ್ಗೆ ತೋಟಕ್ಕೆ ಬಾಳೆಗೊನೆ ಕಡಿಯಲು ಹೋಗಿದ್ದ ವೇಳೆ ಅವರ ಎಡಕಾಲಿನ ಹಿಂಭಾಗಕ್ಕೆ ನಾಗರಹಾವೊಂದು ಕಚ್ಚಿದೆ. ಇದರಿಂದ ಅಸ್ವಸ್ಥಗೊಂಡ ಶೀನಪ್ಪ ಗೌಡರನ್ನು ಮನೆಯವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಾಹ್ನ 3.30ಕ್ಕೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆಗಾಗಲೇ ವಿಷದ ಪ್ರಮಾಣದಿಂದಾಗಿ ಶೀನಪ್ಪ ಗೌಡರು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಸಾವಿನ ಅಂಚಿನಲ್ಲಿದ್ದ ಶೀನಪ್ಪ ಗೌಡ ಅವರನ್ನು ಬದುಕಿಸಲು ವೈದ್ಯರು ಬರೋಬ್ಬರಿ 90 ಇಂಜೆಕ್ಷನ್ ನೀಡಿದ್ದಾರೆ. ವೈದ್ಯರ ಸತತ ಪ್ರಯತ್ನದಿಂದ ಕೊನೆಗೂ ಶೀನಪ್ಪ ಗೌಡ ಅವರು ಬದುಕುಳಿದಿದ್ದಾರೆ.



