ಪುತ್ತೂರು ಜೂನ್ 29: “ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರೂ, ಅವರಿಗೆ ಕಂಬಳ ಕ್ರೀಡೆಯ ಬಗ್ಗೆ ಮಾಹಿತಿ ಕೊಂಚ ಕಡಿಮೆಯಿದೆ. ಕಂಬಳದಲ್ಲಿ ಓಡಿಸುವುದು ಎಮ್ಮೆಗಳನ್ನಲ್ಲ, ಕೋಣಗಳನ್ನು!” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಾಟಾಳ್ ನಾಗರಾಜ್ ಅವರ ಹೇಳಿಕೆಗೆ ಮಾರ್ಮಿಕವಾಗಿ ಕಿವಿಮಾತು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಕಂಬಳ ಆಯೋಜಿಸುವುದನ್ನು ವಿರೋಧಿಸಿದ್ದ ವಾಟಾಳ್ ನಾಗರಾಜ್ ಅವರ ಗೊಂದಲಗಳನ್ನು ಪರಿಹರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

“ಮೈಸೂರು ಮತ್ತು ಬೆಂಗಳೂರಿನ ಜನತೆ ಕಂಬಳ ಕ್ರೀಡೆಯನ್ನು ತಮ್ಮ ಭಾಗದಲ್ಲೂ ನಡೆಸಿಕೊಡುವಂತೆ ನಿರಂತರವಾಗಿ ಬೇಡಿಕೆ ಇಡುತ್ತಿದ್ದಾರೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವು ಪ್ರಮುಖ ಆಕರ್ಷಣೆಯಾಗಲಿದೆ. ಕಂಬಳ ಕೇವಲ ಕರಾವಳಿಗೆ ಸೀಮಿತವಾಗಿರದೆ ಇಡೀ ನಾಡಿನ ಹೆಮ್ಮೆಯಾಗಬೇಕು” ಎಂದು ಶಾಸಕರು ಪ್ರತಿಪಾದಿಸಿದರು.
ಕಂಬಳದ ವೈಭವವನ್ನು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ದೇಶಾದ್ಯಂತ ಪಸರಿಸುವ ಬೃಹತ್ ಯೋಜನೆಯನ್ನು ಹಂಚಿಕೊಂಡ ಅಶೋಕ್ ಕುಮಾರ್ ರೈ, “ಮೈಸೂರು, ಬೆಂಗಳೂರು ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲೂ ಕಂಬಳ ಕ್ರೀಡೆಯನ್ನು ಪ್ರದರ್ಶಿಸಬೇಕೆಂಬ ಬಲವಾದ ಕನಸು ನನ್ನದಾಗಿದೆ. ಕರಾವಳಿಯ ಹೆಮ್ಮೆಯ ಕಲೆಗಳಾದ ಯಕ್ಷಗಾನ ಮತ್ತು ಸಾಂಪ್ರದಾಯಿಕ ಕಂಬಳ ಎರಡನ್ನೂ ದೇಶ ಹಾಗೂ ಜಗತ್ತಿನ ಜನತೆಗೆ ಪರಿಚಯಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮುಂದುವರಿಸಲಾಗುವುದು” ಎಂದು ಮಾಹಿತಿ ನೀಡಿದರು.