ಪುತ್ತೂರು ಜೂನ್ 23: “ಸಿಹಿ ಎಲ್ಲಿದೆಯೋ ಅಲ್ಲಿಗೆ ಇರುವೆಗಳು ಹೋಗುವುದು ಸಹಜ. ಅದೇ ರೀತಿ ಕೆಲವು ಶಾಸಕರು ಹೋಗಿದ್ದಾರೆ. ಮನಸ್ಸಿನಲ್ಲಿ ಕಳ್ಳತನ ಇಟ್ಟುಕೊಂಡು ಆಣೆ-ಪ್ರಮಾಣ ಮಾಡಿದರೆ ಏನು ಪ್ರಯೋಜನ? ಮೊದಲು ತಮ್ಮ ಮನಸಾಕ್ಷಿಯನ್ನು ತಿದ್ದಿಕೊಂಡು, ಅಭಿವೃದ್ಧಿ ಪರ ಕೆಲಸ ಮಾಡಲಿ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರೋಧ ಪಕ್ಷಗಳಿಗೆ ತೀಕ್ಷ್ಣವಾಗಿ ಟಾಂಗ್ ನೀಡಿದ್ದಾರೆ.

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ (Cross Voting) ಹಿನ್ನೆಲೆಯಲ್ಲಿ, ತಪ್ಪಿತಸ್ಥರನ್ನು ಪತ್ತೆಹಚ್ಚಲು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂಬ ವರದಿಗಳಿಗೆ ಪುತ್ತೂರಿನಲ್ಲಿ ಮಾಧ್ಯಮಗಳ ಮೂಲಕ ಶಾಸಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅಡ್ಡ ಮತದಾನದ ಕುರಿತು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, “ವಿಧಾನಪರಿಷತ್ ಚುನಾವಣೆಯಲ್ಲಿ ಸ್ವತಃ ಬಿಜೆಪಿ ಶಾಸಕರೇ ಅಡ್ಡ ಮತದಾನ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ತನ್ನದೇ ಶಾಸಕರ ಮೇಲೆ ನಿಯಂತ್ರಣವಿಲ್ಲವೇ? ಇನ್ನು ಜೆಡಿಎಸ್ ಪಕ್ಷಕ್ಕೆ ಅವರ ಶಾಸಕರ ಮೇಲೆ ಹಿಡಿತ ತಪ್ಪಿದೆಯೇ? ಶಾಸಕರಿಗೆ ಎಲ್ಲೋ ‘ಸ್ವೀಟ್’ ಸಿಕ್ಕಿದೆ ಎಂದು ಅಡ್ಡ ಮತದಾನ ಮಾಡಿದ್ದಾರೆ” ಎಂದು ಲೇವಡಿ ಮಾಡಿದರು.
ಇದೇ ವೇಳೆ ಕರಾವಳಿ ಭಾಗದ ಶಾಸಕರು ಯಾರಾದರೂ ಅಡ್ಡ ಮತದಾನದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಕುಮಾರ್ ರೈ, “ಕರಾವಳಿ ಭಾಗದ ಶಾಸಕರು ಅಡ್ಡ ಮತದಾನ ಮಾಡಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ” ಎಂದು ಸ್ಪಷ್ಟಪಡಿಸಿದರು. ವಿರೋಧ ಪಕ್ಷಗಳು ಧರ್ಮಸ್ಥಳಕ್ಕೆ ಹೋಗಿ ಆಣೆ-ಪ್ರಮಾಣ ಮಾಡುವ ನಾಟಕ ಆಡುವ ಬದಲು, ಸ್ವಪಕ್ಷದ ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ ಎಂದು ಅವರು ಕಿಡಿಕಾರಿದ್ದಾರೆ.