ಪುತ್ತೂರು: “ಸರ್ಕಾರ ನೀಡುವ ಅನುದಾನದಲ್ಲಿ ನಿರ್ಮಾಣವಾಗುವ ರಸ್ತೆಗಳನ್ನು ಅಂದವಾಗಿ ಮತ್ತು ಬಾಳಿಕೆ ಬರುವಂತೆ ನೋಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ,” ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಭಾನುವಾರ ನಗರದ ಮಂಜಲ್ಪಡ್ಪು ಕಾಲೋನಿಯಲ್ಲಿ ಹೊಸ ರಸ್ತೆಯನ್ನು ಉದ್ಘಾಟಿಸಿ ಮರಳುತ್ತಿದ್ದ ಶಾಸಕರು, ರಸ್ತೆ ಬದಿಯಲ್ಲಿ ಮುಳ್ಳಿನ ಗಿಡಗಂಟಿಗಳು ರಸ್ತೆಯ ಮಧ್ಯಭಾಗದವರೆಗೂ ಬೆಳೆದಿರುವುದನ್ನು ಗಮನಿಸಿದರು. ತಕ್ಷಣವೇ ವಾಹನ ನಿಲ್ಲಿಸಿದ ಶಾಸಕರು, ಪಕ್ಕದ ಮನೆಯವರಿಂದ ಕತ್ತಿ ಪಡೆದು ತಾವೇ ಮುಳ್ಳಿನ ಗಿಡಗಳನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ರಸ್ತೆ ನಿರ್ಮಾಣವಾದ ಬಳಿಕ ಅಲ್ಲಿ ಸಂಚರಿಸುವವರು ವರ್ಷಕ್ಕೊಮ್ಮೆ ಶ್ರಮದಾನ ಮಾಡುವ ಮೂಲಕ ರಸ್ತೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಮ್ಮ ಮನೆ ಮುಂದಿನ ರಸ್ತೆಗೆ ತಾಗಿಕೊಂಡಿರುವ ಮುಳ್ಳು ಗಿಡಗಳನ್ನು ನೀವೇ ಕಡಿಯುವ ಮೂಲಕ ರಸ್ತೆಯ ಅಂದವನ್ನು ಕಾಪಾಡಬೇಕು,” ಎಂದು ಮನವಿ ಮಾಡಿದರು. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.