ಬಂಟ್ವಾಳ ಮೇ 26: ತಮ್ಮ ವಿರುದ್ಧ ಪ್ರತಿಭಟನೆ ಮಾಡಿದರು ಎನ್ನುವ ಒಂದೇ ಕಾರಣಕ್ಕೆ ಮೂರು ಬಡ ಕುಟುಂಬಗಳಿಗೆ ನೀಡಬೇಕಾದ ಹಕ್ಕುಪತ್ರವನ್ನು ತಡೆಹಿಡಿದ ಆರೋಪ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಮೇಲೆ ಕೇಳಿ ಬಂದಿದೆ. ಬಂಟ್ವಾಳ ತಾಲೂಕಿನ ಪುಚಣ ಗ್ರಾಮದ ದೇವಿನಗರ ಎಂಬಲ್ಲಿ ಸರಕಾರ ಜಮೀನಿನಲ್ಲಿ ಹಲವು ಕುಟುಂಬಗಳು ಪುಟ್ಟ ಮನೆಗಳನ್ನು ನಿರ್ಮಿಸಿ ವಾಸಿಸುತ್ತಿವೆ. ಹೀಗೆ ಸರಕಾರಿ ಜಾಗದಲ್ಲಿ ಕುಳಿತ ಹಲವು ಕುಟುಂಬಗಳಿಗೆ ಸರಕಾರ ಈಗಾಗಲೇ ಹಕ್ಕುಪತ್ರ ನೀಡಿದ್ದು, ಮೂರು ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ನೀಡದೆ ವಿಳಂಬ ಮಾಡಿರೋದು ಇದೀಗ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ದೇವಿನಗರ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಹಲವು ಕುಟುಂಬಗಳು ಕಳೆದ ಏಳೆಂಟು ವರ್ಷಗಳಿಂದ ಮನೆ ನಿರ್ಮಿಸಿ ವಾಸ ಮಾಡುತ್ತಿದೆ. ಈ ಪುಣಚ ಗ್ರಾಮವು ಬಂಟ್ವಾಳ ತಾಲೂಕಿಗೆ ಸೇರಿದ್ದರೂ, ಇದು ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಹಲವು ಕುಟುಂಬಗಳಿಗೆ ಸರಕಾರದಿಂದ ಈಗಾಗಲೇ ಹಕ್ಕುಪತ್ರ ನೀಡಲಾಗಿದ್ದು, ಮೂರು ಕುಟುಂಬಗಳು ಕಳೆದ ಎಂಟು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಸರಕಾರಿ ಕಛೇರಿಗಳನ್ನು, ಜನಪ್ರತಿನಿಧಿಗಳ ಕಛೇರಿಯನ್ನು ಅಲೆದಾಡಿದರೂ, ಈ ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ಸಿಕ್ಕಿಲ್ಲ. ಕಳೆದ ಫೆಬ್ರವರಿ 16 ರಂದು ಈ ಮೂರು ಕುಟುಂಬದ ಸದಸ್ಯರು ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರ ಕಛೇರಿಗೆ ತೆರಳಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿತ್ತು. ಆ ಬಳಿಕ ಶಾಸಕರಿಂದಲೂ ಯಾವುದೇ ಸ್ಪಂದನೆ ದೊರೆಯದಾದಾಗ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂರು ಕುಟುಂಬದ ಸದಸ್ಯರು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಜೊತೆ ಸೇರಿಕೊಂಡು ಬಂಟ್ವಾಳದ ತಹಶೀಲ್ದಾರ್ ಕಛೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗೆ ಬಿಜೆಪಿ ಪಕ್ಷವೂ ಬೆಂಬಲ ನೀಡಿ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಸರಕಾರವನ್ನು ಒತ್ತಾಯಿಸಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಬಂಟ್ವಾಳ ತಹಶೀಲ್ದಾರ್ ಮೇ 26 ರಂದು ಎಲ್ಲಾ ಮೂರು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಲಿಖಿತ ಭರವಸೆಯನ್ನು ನೀಡಿದ್ದರು. ಆ ಬಳಿಕ ನಡೆದ ವಿದ್ಯಾಮಾನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಬಡ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಕಾನೂನಿನ ತೊಡಕು ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಹಕ್ಕುಪತ್ರ ವಂಚಿತ ಕುಟುಂಬಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಕ್ಕುಪತ್ರ ನೀಡುವುದಾಗಿ ಶಾಸಕರ ಸೂಚನೆಯಂತೆ ಬಂಟ್ವಾಳ ತಹಶೀಲ್ದಾರ್ ಕುಟುಂಬಗಳಿಗೆ ಭರವಸೆ ನೀಡಿದ್ದರು. ಆದರೆ ತನ್ನ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕೆ ಜಮೀನಿಗೆ ಮೂವರ ಆಕ್ಷೇಪವಿದೆ, ಡಿಸಿ ಕೋರ್ಟ್ ನಲ್ಲಿದೆ ಎನ್ನುವ ಮೂಲಕ ಹಕ್ಕುಪತ್ರ ನೀಡುವುದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.

ಮೂರು ಕುಟುಂಬಗಳು ಹಕ್ಕುಪತ್ರಕ್ಕಾಗಿ ಸರಕಾರಕ್ಕೆ ಕಟ್ಟಬೇಕಾದ ಹಣವನ್ನು ಕಟ್ಟಿದ್ದು, ಜಾಗ ಮಂಜೂರಾತಿಗೆ ಬೇಕಾದ ಎಲ್ಲಾ ಕೆಲಸಗಳನ್ನೂ ಮುಗಿಸಲಾಗಿದೆ. ಹಕ್ಕುಪತ್ರ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ನಡುವೆ ಸರಕಾರಿ ಜಾಗಕ್ಕೆ ಆಕ್ಷೇಪ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಬಡ ದಲಿತ ಕುಟುಂಬಗಳಿಗೆ ನೀಡಬೇಕಾದ ಹಕ್ಕುಪತ್ರವನ್ನು ತಡೆಹಿಡಿಯುವ ಕಾರ್ಯವನ್ನು ಮಾಡಲಾಗಿದೆ. ಹಕ್ಕುಪತ್ರಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ, ಸರಕಾರಕ್ಕೆ ಕಟ್ಟಬೇಕಾದ ಹಣವನ್ನು ಕಟ್ಟಿದ ಬಳಿಕ ಇದೀಗ ಕೊನೆಯ ಕ್ಷಣದಲ್ಲಿ ಜಾಗಕ್ಕೆ ಆಕ್ಷೇಪವಿದೆ ಎನ್ನುವ ಕಾರಣ ನೀಡಿ ನಿರಾಕರಣೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೂರು ಕುಟುಂಬಗಳ ಜೊತೆಗೆ ಇನ್ನೂ ಹಲವು ಮನೆಗಳು ಅದೇ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ. ಹಕ್ಕುಪತ್ರ ವಂಚಿತ ಕುಟುಂಬಗಳು ಮನೆ ನಿರ್ಮಿಸಿದ ಬಳಿಕ ನಿರ್ಮಾಣವಾದ ಮನೆಗಳಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ಆದರೆ ಈ ಮೂರು ಮನೆಗಳಿಗೆ ಮಾತ್ರ ಹಕ್ಕುಪತ್ರ ನೀಡದಿರುವ ಹಿಂದೆ ಕೆಲವು ರಿಯಲ್ ಎಸ್ಟೇಟ್ ಮಾಫಿಯಾಗಳ ಕೈವಾಡವೂ ಇದೆ ಎನ್ನುವ ಆರೋಪವಿದೆ. ಹಕ್ಕುಪತ್ರ ನೀಡುವ ತನಕ ಮತ್ತೆ ಆಹೋರಾತ್ರಿ ಪ್ರತಿಭಟನೆಗೆ ಮೂರೂ ಕುಟುಂಬಗಳು ನಿರ್ಧರಿಸಿದ್ದು, ಪುತ್ತೂರು ಶಾಸಕರ ಒಣ ಪ್ರತಿಷ್ಟೆಯಿಂದಾಗಿ ಬಡ ಕುಟುಂಬದ ಮಕ್ಕಳು ಸೇರಿದಂತೆ ವೃದ್ಧರು ರಸ್ತೆಯಲ್ಲೇ ತಮ್ಮ ಹಕ್ಕಿಗಾಗಿ ಹೋರಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.