ಮಂಗಳೂರು, ಏಪ್ರಿಲ್ 22: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಆರೋಪ ಎದುರಿಸುತ್ತಿರುವ ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. “ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಆಕೆಯನ್ನು ಮದುವೆಯಾಗುವುದೇ ಸೂಕ್ತ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಯುವತಿ ಮತ್ತು ಮಗುವನ್ನು ಅನಾಥರನ್ನಾಗಿ ಮಾಡುವುದು ಸರಿಯಲ್ಲ. ತಂದೆಯಾಗಿ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ” ಎಂದು ತಿಳಿಸಿದೆ. ಅಲ್ಲದೆ, ಯುವತಿಗೆ ಮಾಸಿಕ ₹10 ಸಾವಿರ ಜೀವನಾಂಶ ನೀಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿ, ಏಪ್ರಿಲ್ 24ಕ್ಕೆ ವಿಚಾರಣೆ ಮುಂದೂಡಿದೆ.

ಆರೋಪಿ ಪರ ವಾದ ಮಂಡಿಸಿದ ವಕೀಲ ಪಿ.ಪಿ. ಹೆಗ್ಡೆ ಅವರು, “ಇದು ಏಳು ವರ್ಷಗಳ ಪ್ರೀತಿಯಾಗಿದ್ದು, ರಾಜಕೀಯ ವಿರೋಧಿಗಳು ಆರೋಪಿಯ ತಂದೆಯ ತೇಜೋವಧೆ ಮಾಡಲು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ವಾದಿಸಿದರು. ಆದರೆ, ಮಗುವಿನ ಹಿತದೃಷ್ಟಿಯಿಂದ ನ್ಯಾಯಾಲಯವು ಮಾನವೀಯ ನೆಲಗಟ್ಟಿನಲ್ಲಿ ಮದುವೆಯಾಗುವಂತೆ ಸೂಚಿಸಿದೆ.