LATEST NEWS
ಆಭರಣ ಮಳಿಗೆ ಲಾಭಿಗೆ ಬಲಿಯಾಯಿತೇ ಪಕ್ಷಿ ಸಂಕುಲ
ಆಭರಣ ಮಳಿಗೆ ಲಾಭಿಗೆ ಬಲಿಯಾಯಿತೇ ಪಕ್ಷಿ ಸಂಕುಲ
ಪುತ್ತೂರು ಜುಲೈ 30: ಪುತ್ತೂರಿನ ಇತಿಹಾಸ ಪ್ರಸಿದ್ಧ ಗಾಂಧೀಕಟ್ಟೆಯಲ್ಲಿರುವ ಅಶ್ಚಥ ಮರದ ಕೊಂಬೆಗಳನ್ನು ಪುತ್ತೂರು ಪೋಲೀಸರು ಕಡಿದು ಹಾಕಿರುವ ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿಯನ್ನು ಪಡೆಯದೆ ಪೋಲೀಸರು ಈ ಮರದ ಕೊಂಬೆಗಳನ್ನು ಕಡಿದ ಕಾರಣ ಪರಿಸರವಾದಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಪುತ್ತೂರು ನಗರದ ಸರಕಾರಿ ಬಸ್ ನಿಲ್ದಾಣದ ಬಳಿ ಇರುವ ಈ ಗಾಂಧಿಕಟ್ಟೆಯಲ್ಲಿರುವ ಅಶ್ವಥ ಮರದ ಕೊಂಬೆಗಳನ್ನು ಪುತ್ತೂರು ನಗರ ಪೋಲೀಸರು ತಮ್ಮ ಸ್ವಂತ ಹಿತಾಸಕ್ತಿಯಿಂದ ಕಡಿದಿದ್ದಾರೆ. ಈ ಮರವು ನೂರಾರು ಹಕ್ಕಿಗಳ ವಾಸಸ್ಥಾನವಾಗಿದ್ದು, ಮರವನ್ನು ಏಕಾಏಕಿ ಕಡಿದು ಹಾಕಿದ ಪರಿಣಾಮ ಹತ್ತಾರು ಮರಿ ಹಕ್ಕಿಗಳು ಸತ್ತಿದ್ದು, ನೂರಾರು ಹಕ್ಕಿಗಳ ಮೊಟ್ಟೆಗಳು ಒಡೆದುಹೋಗಿವೆ.
ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡದೆಯೇ ಪುತ್ತೂರು ಪೋಲೀಸರು ನಡೆಸಿದ ಕ್ರಮ ಭಾರೀ ವಿವಾದಕ್ಕೂ ಕಾರಣವಾಗಿದೆ. ಹಲವು ವರ್ಷಗಳಿಂದ ಈ ಮರ ಗಾಂಧಿಕಟ್ಟೆಯಲ್ಲಿದ್ದು, ಮರ ಕಡಿಯುವುದಕ್ಕೆ ಪರಿಸರವಾದಿಗಳು ಹಾಗೂ ಹಿರಿಯ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನಲೆಯಲ್ಲಿ ಈ ಮರವನ್ನು ಹಾಗೆಯೇ ಬಿಡಲಾಗಿತ್ತು.
ಸರಕಾರಿ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಈ ಮರವು ಹಲವು ಅಂಗಡಿಗಳಿಗೆ ಅಡ್ಡವಾಗುತ್ತದೆ ಎನ್ನುವ ಕಾರಣಕ್ಕಾಗಿ ಮರವನ್ನು ಕಡಿಯಬೇಕೆಂದು ಈ ಅಂಗಡಿ ಮಾಲಿಕರು ಭಾರೀ ಲಾಭಿ ಮಾಡಿದ್ದರು.
ಇದೀಗ ಈ ಕಟ್ಟಡದಲ್ಲಿ ಹೊಸತೊಂದು ಆಭರಣ ಮಳಿಗೆ ಉದ್ಘಾಟನೆಗೊಳ್ಳಲಿದ್ದು, ಇದೇ ಮಳಿಗೆಯ ಲಾಭಿಗೆ ಮಣಿದು ಪೋಲೀಸರು ತಮ್ಮಷ್ಟಕ್ಕೆ ಬಂದು ಮರ ಕಡಿದರೇ ಎನ್ನುವ ಆರೋಪ ಕೇಳಿ ಬರುತ್ತಿದೆ. ಹತ್ತಾರು ವರ್ಷದಿಂದ ಇರುವ ಈ ಮರದ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದ ಪೋಲೀಸರು ಇದೀಗ ಏಕಾಏಕಿ ಬಂದು ಮರ ಕೊಂಬೆಗಳನ್ನು ಕಡಿದಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಮರದ ಕೊಂಬೆಗಳ ಜೊತೆಗೆ ನೂರಾರು ಹಕ್ಕಿಗಳ ಸಂತತಿಯೂ ನಾಶವಾಗಿ ರಸ್ತೆಗೆ ಬಿದ್ದಿರುವ ದೃಶ್ಯ ಎಲ್ಲರ ಮನ ಕಲಕುವಂತಿದೆ.
ಈ ಮರದ ಕೊಂಬೆಯಿಂದಾಗಿ ಟ್ರಾಫಿಕ್ ಗೆ ಸಮಸ್ಯೆಯಾಗುತ್ತಿದೆ ಎನ್ನುವ ಪುತ್ತೂರು ಪೋಲೀಸರ ವಾದವನ್ನು ಯಾವ ರೀತಿಯಾಗಿ ಒಪ್ಪಿಕೊಳ್ಳಬಹುದು ಎನ್ನುವ ಜಿಜ್ಞಾಸೆಯಲ್ಲಿ ಪುತ್ತೂರಿನ ನಾಗರಿಕರಿದ್ದಾರೆ. ವಾಹನಗಳು ರಸ್ತೆಯಲ್ಲಿ ಹೋಗುತ್ತದೆಯೋ ಅಥವಾ ಮರದ ಮೇಲಿಂದ ಹೋಗುತ್ತದೋ ಎನ್ನುವ ಸಂಶಯ ಇದೀಗ ಪೋಲೀಸರ ವಾದದ ಬಳಿಕ ಹುಟ್ಟಿಕೊಂಡಿದೆ.
You must be logged in to post a comment Login