ಬಂಟ್ವಾಳ ಸೆಪ್ಟೆಂಬರ್ 11: ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಆಟೋ ಚಾಲಕನಿಗೆ ಪೂಂಜಾಲಕಟ್ಟೆ ಜನೌಷಧಿ ಕೇಂದ್ರ ಸಕಾಲದಲ್ಲಿ ಪ್ರಾಥಮಿಕಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ನಡೆದಿದೆ.

ಪ್ರಧಾನಮಂತ್ರಿ ಜನ ಔಷಧಿ ಕೇಂದ್ರದ ಸಿಬ್ಬಂದಿ ಸುರೇಖಾ ಅವರು ಸಕಾಲದಲ್ಲಿ ನೆರವು ನೀಡಿದ್ದರಿಂದ ಅಟೋ ಚಾಲಕನ ಜೀವ ಉಳಿದಿದೆ ಎಂದು ಹೇಳಲಾಗಿದೆ. ಪ್ರಧಾನಮಂತ್ರಿ ಜನಔಷಧಿ ಕೇಂದ್ರವು ಪುಂಜಾಲಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಈ ಕೇಂದ್ರಕ್ಕೆ ಆಟೋ ಚಾಲಕರೊಬ್ಬರು ತನ್ನ ಅಣ್ಣನಿಗೆ ಔಷಧಿ ಖರೀದಿಸಲು ಬಂದಿದ್ದರು. ಔಷಧಿ ಪಡೆದುಕೊಂಡ ನಂತರ ಚಿಲ್ಲರೆ ಹಣ ನೀಡಲು ತನ್ನ ಆಟೋದ ಬಳಿಗೆ ತೆರಳಿದಾಗ, ಅಸ್ವಸ್ಥಗೊಂಡು ತಲೆ ತಿರುಗಿ ಬಿದ್ದ ಅವರ ತುರ್ತು ಪರಿಸ್ಥಿತಿಯನ್ನು ಗಮನಿಸಿದ ಸುರೇಖಾ ಅವರು ಇತರ ಸಿಬ್ಬಂದಿಯ ಸಹಾಯ ಪಡೆದು ತಕ್ಷಣ ಅವರನ್ನು ಒಳಗೆ ಕರೆದುಕೊಂಡು ಬಂದು ರಕ್ತದೊತ್ತಡ ಪರೀಕ್ಷಿಸಿದ ಸಮಯದಲ್ಲಿ ಬಿ.ಪಿ ತೀರಾ ಕಡಿಮೆಯಾಗಿ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ದೃಢಪಟ್ಟಿದ್ದು. ತಕ್ಷಣವೇ ಅವಶ್ಯಕ ಉಪಚಾರ ನೀಡಿದ್ದಾರೆ.
ಅದಾಗಲೇ ಅಟೋ ಚಾಲಕ ಪ್ರಜ್ಞೆ ಕಳೆದುಕೊಂಡಿದ್ದು, ಸುರೇಖಾ ಅವರು ಹೃದಯ ಸಿಪಿಆರ್ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿದ ಪರಿಣಾಮ ಆಟೋ ಚಾಲಕನಿಗೆ ಪ್ರಜ್ಞೆ ಮರಳಿ ಬಂದಿದೆ. ನಂತರ ಅವರನ್ನು ತಜ್ಞ ವೈದ್ಯರ ಬಳಿಗೆ ತಪಾಸಣೆಗೆ ಶಿಫಾರಸು ಮಾಡಿದ್ದಾರೆ. ಸುರೇಖಾರವರ ಸಮಯೋಚಿತ ಕಾರ್ಯದಿಂದ ಜೀವ ಉಳಿಸಿದ ಈ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದು, ಸುರೇಖಾ ಅವರ ಸೇವಾ ಮನೋಭಾವನೆಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.



