ಪ್ರಧಾನಿ ನರೇಂದ್ರ ಮೋದಿ ನಾಳೆ ಶುಕ್ರವಾರ ಕೃಷ್ಣ ನಗರಿ ಉಡುಪಿ ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಪ್ರಧಾನಿ ಹಿನ್ನೆಲೆಯಲ್ಲಿ ಉಡುಪಿ ಫುಲ್ ಕೇಸರಿಮಯವಾಗಿದೆ.
ಉಡುಪಿ : ಪ್ರಧಾನಿ ನರೇಂದ್ರ ಮೋದಿ ನಾಳೆ ಶುಕ್ರವಾರ ಕೃಷ್ಣ ನಗರಿ ಉಡುಪಿ ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಪ್ರಧಾನಿ ಹಿನ್ನೆಲೆಯಲ್ಲಿ ಉಡುಪಿ ಫುಲ್ ಕೇಸರಿಮಯವಾಗಿದೆ.

ಬೆಳಗ್ಗೆ 11 ಗಂಟೆಯಿಂದ 11.30 ಕ್ಕೆ ಪ್ರಧಾನಿ ಅವರು ರೋಡ್ ಶೋ ದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಬೇಕಾದ ಸಿದ್ಧತೆ ಅಂತಿಮವಾಗಿದೆ. ಶ್ರೀಕೃಷ್ಣ ಮಠದ ಲಕ್ಷ ಕಂಠ ಭಗವದ್ಗೀತೆ ಪಠಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಸಮಯದಲ್ಲಿ ಶಿಷ್ಟಾಚಾರ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಟಿ.ಕೆ ಸ್ವರೂಪ್ ಆದೇಶಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNS) 2023, ಸೆಕ್ಷನ್ 163ರ ಅನ್ವಯ ಆದೇಶಿಸಿದ್ದಾರೆ. ಪ್ರಧಾನಿ ಮೋದಿ ಹಾದು ಹೋಗುವ ಆದಿ ಉಡುಪಿಯಿಂದ ಲಕ್ಷ ಕಂಠ ಗೀತಾ ಗಾಯನ ವೇದಿಕೆ ತನಕದ ಎರಡೂ ಬದಿಗಳಲ್ಲಿಹಾಗೂ ಡಿವೈಡರ್ ಸಹಿತ ಕಟ್ಟಡ, ಬಾವಿ, ಚರಂಡಿ, ಸಂದಿ ಗೊಂದಿ, ಆಯಕಟ್ಟಿನ ಜಾಗಗಳನ್ನು ಶ್ವಾನ ದಳ , ಆ್ಯಂಟಿ ಸಬೋಟೇಜ್ ಚೆಕ್ ತಂಡ ಸಮಗ್ರ ಪರಿಶೀಲನೆ ನಡೆಸಿದೆ.

ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ. ಅಲ್ಲದೇ ನವೆಂಬರ್ 28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಇರಬೇಕು. ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಿದ್ದು, ಉಡುಪಿಯನ್ನ ನೋ ಫ್ಲೈ ಝೋನ್ ಎಂದು ಘೋಷಿಸಲಾಗಿದೆ.
ಆದಿ ಉಡುಪಿಯ ನಾಲ್ಕು ಹೆಲಿಪ್ಯಾಡ್ಗಳ ಪೈಕಿ ಒಂದರಲ್ಲಿ ಬಂದಿಳಿಯುವ ಪ್ರಧಾನಿ ಮೋದಿ ಬನ್ನಂಜೆಯಿಂದ ಕಲ್ಸಂಕ ತನಕ ಕಾರಿನಲ್ಲಿ ಇಕ್ಕೆಲಗಳಲ್ಲಿರುವ ಜನರತ್ತ ಕೈ ಬೀಸುತ್ತಾ ಬರಲಿದ್ದಾರೆ.

ಇನ್ನೂ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಪ್ರಧಾನಿಗಳ ರೋಡ್ ಶೋ ವೀಕ್ಷಣೆಗೆ ಬರುವ ಅಭಿಮಾನಿಗಳು, ಸಾರ್ವಜನಿಕರಿಗೂ ಕಟ್ಟು ನಿಟ್ಟಿನ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ. ರೋಡ್ ಶೋ ವೀಕ್ಷಣೆಗೆ ಬರುವವರು ಬ್ಯಾಗ್, ನೀರಿನ ಬಾಟಲ್, ಧ್ವಜ ತರುವಂತಿಲ್ಲ. ಫೋಟೋ, ಸ್ಟಿಕರ್ಸ್, ಬಲೂನ್ಸ್, ಪಟಾಕಿ, ಲೂಸ್ ಪಾಲಿಥಿನ್ ತರುವುದನ್ನ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.



