ಕೃತಕ ಬುದ್ಧಿಮತ್ತೆ (AI) ಮಾನವ ಸಮಾಜದ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿದ್ದು, ಅದರ ಪರಿಣಾಮಗಳು ಈಗಾಗಲೇ ಸ್ಪಷ್ಟವಾಗಿ ಕಂಡುಬರುತ್ತಿವೆ. ಈ ಪರಿಣಾಮಗಳ ಸ್ಪೇಸ್ ಎಕ್ಸ್ ಮಾಲೀಕ ಎಲಾನ್ ಮಸ್ಕ್ ಅವರು ಮಾತನಾಡಿದ್ದು, “ಭವಿಷ್ಯದಲ್ಲಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ “ಪೀಪಲ್ ಬೈ ಡಬ್ಲೂಟಿಎಫ್” ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ಎಲಾನ್ ಮಸ್ಕ್, “ಮುಂದಿನ 20 ವರ್ಷಗಳಲ್ಲಿ ಜನರಿಗೆ ಕೆಲಸವು ಕೇವಲ ಆಯ್ಕೆಯಾಗಿ ಉಳಿಯಲಿದೆ. ಜನರು ಏಳು ದಿನಗಳ ತೀವ್ರ ನಿದ್ರೆ-ಎಚ್ಚರ-ಕೆಲಸ-ಪುನರಾವರ್ತನೆ ವೇಳಾಪಟ್ಟಿಯನ್ನು ಅನುಸರಿಸಲಿದ್ದಾರೆ” ಎಂದು ಹೇಳಿದ್ದಾರೆ.
“ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ತಂತ್ರಜ್ಞಾನವು ಭಾರೀ ಬದಲಾವಣೆಗಳನ್ನು ತರಲಿದ್ದು, ಮುಂದಿನ 20 ವರ್ಷಗಳಲ್ಲಿ ಮಾನವರ ಕೆಲಸದ ಪರಿಕಲ್ಪನೆ ಸಂಪೂರ್ಣವಾಗಿ ಬದಲಾಗಲಿದೆ. ಕೆಲಸ ಮಾಡುವುದು ಸಂಪೂರ್ಣವಾಗಿ ಐಚ್ಛಿಕವಾಗಿರಲಿದ್ದು, ಒಂದು ಹವ್ಯಾಸವಾಗಿ ಪರಿವರ್ತನೆಗೊಳ್ಳಲಿದೆ” ಎಂದು ಎಲಾನ್ ಮಸ್ಕ್ ಭವಿಷ್ಯ ನುಡಿದಿದ್ದಾರೆ. ಮಸ್ಕ್ ಕೃತಕ ಬುದ್ಧಿಮತ್ತೆ ಸರ್ವವ್ಯಾಪಿ ಎಂದು ಹೇಳಿದ್ದಾರೆ.
AI ಮತ್ತು ರೊಬೊಟಿಕ್ಸ್ ತಂತ್ರಜ್ಷಾನದಲ್ಲಿ ಕಂಡುಬರುವ ಪ್ರಗತಿಗಳು, ನಮ್ಮನ್ನು ಕೆಲಸ ಮಾಡುವುದು ಐಚ್ಛಿಕ ಎಂಬ ಹಂತಕ್ಕೆ ತರುತ್ತದೆ. ಈ ಹಂತದಲ್ಲಿ ನೀವು ನಿಮ್ಮ ತೋಟದಲ್ಲಿ ನಿಮ್ಮ ಸ್ವಂತ ತರಕಾರಿಗಳನ್ನು ಬೆಳೆಸಬಹುದು ಅಥವಾ ನೀವು ಅಂಗಡಿಗೆ ಹೋಗಿ ತರಕಾರಿಗಳನ್ನು ಖರೀದಿಸಬಹುದು” ಎಂದು ಬಿಲಿಯನೇರ್ ಉದ್ಯಮಿ ಹಾಸ್ಯಚಟಾಕಿ ಹಾರಿಸಿದ್ದಾರೆ.
“ಗ್ರೋಕ್ ಎಂಬ ಚಾಟ್ಬಾಟ್ ಹೊಂದಿರುವ xAI ಕಂಪನಿ, ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿದೆ. ಇದರ ಆಧಾರದ ಮೇಲೆ ಮುಂದಿನ 20 ವರ್ಷಗಳಲ್ಲಿ AI ಮತ್ತು ರೋಬೊಟಿಕ್ಸ್ ತಂತ್ರಜ್ಞಾನ ನಮ್ಮನ್ನು ಹೇಗೆ ಆವರಿಸಿಕೊಳ್ಳಲಿದೆ ಎಂಬುದನ್ನು ನಾವು ಅಂದಾಜಿಸಬಹುದಾಗಿದೆ” ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಪ್ರಧಾನಿ ಮೋದಿ ಕೂಡ ಹಿಂದೆ AIನಿಂದಾಗಿ ಉದ್ಯೋಗ ಕಡಿತ ಭಯ ಸುಳ್ಳಲ್ಲ ಎಂದು ಹೇಳಿದ್ದರು.
“AI ಮತ್ತು ರೊಬೊಟಿಕ್ಸ್ ಮುಂದುವರೆದರೆ, ಕೆಲಸ ಮಾಡುವುದು ಐಚ್ಛಿಕವಾಗಿರುತ್ತದೆ ಮತ್ತು ಜನರಿಗೆ ಅವರು ಬಯಸುವ ಯಾವುದೇ ಸರಕು ಮತ್ತು ಸೇವೆಗಳು ಅತ್ಯಂತ ಸುಲಭವಾಗಿ ಸಿಗಲಿವೆ. ಭವಿಷ್ಯದಲ್ಲಿ AI ಮತ್ತು ರೊಬೊಟಿಕ್ಸ್ ಮನುಷ್ಯರನ್ನು ಸಂತೋಷಪಡಿಸಲು ಮಾಡಬೇಕಾದ ಎಲ್ಲಾ ಕೆಲಸಗಳನ್ನು ಮಾಡಲಿವೆ” ಎಂದು ಟೆಸ್ಲಾ ಮುಖ್ಯಸ್ಥರು ನುಡಿದರು.
ಬಡತನವೇ ಇರಲ್ಲ:
“ಒಂದು ನಿರ್ದಿಷ್ಟ ಹಂತದಲ್ಲಿ, AI ವಾಸ್ತವವಾಗಿ ಮಾನವರು ಯೋಚಿಸಬಹುದಾದ ಯಾವುದೇ ವಿಷಯದ ಬಗ್ಗೆ ಪರಿಹಾರವನ್ನು ನೀಡುವ ಸಾಮರ್ಥ್ಯ ಗಳಿಸಿರುತ್ತದೆ. ಆ ಸಮಯದಲ್ಲಿ, AIಮತ್ತು ರೊಬೊಟಿಕ್ಸ್ಗಾಗಿ ಮನವರು ಕೆಲಸ ಮಾಡುವ ಪರಿಸ್ಥಿತಿ ಉದ್ಭವವಾಗುತ್ತದೆ. ಮನುಷ್ಯರ ಕೆಲಸ ಮಾಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದಲ್ಲಿ ಭಾರೀ ಬದಲಾವಣೆ ಕಾಣಲಿದೆ” ಎಂದು ಎಲಾನ್ ಮಸ್ಕ್ ಅಂದಾಜಿಸಿದ್ದಾರೆ.
ಎಲಾನ್ ಮಸ್ಕ್ ಇಂತಹ ಭವಿಷ್ಯ ನುಡಿದಿರುವುದು ಇದೇ ಮೊದಲಲ್ಲ. ನವೆಂಬರ್ 19 ರಂದು ನಡೆದ ಯುಎಸ್-ಸೌದಿ ಹೂಡಿಕೆ ವೇದಿಕೆಯಲ್ಲಿ, AI ಮತ್ತು ರೋಬೋಟ್ಗಳು ಅಂತಿಮವಾಗಿ ಮನುಷ್ಯರಿಗೆ ಕೆಲಸವನ್ನು ಐಚ್ಛಿಕಗೊಳಿಸುತ್ತದೆ. ಹಣವು ಅಪ್ರಸ್ತುತವಾಗಲಿದ್ದು, ಬಡತನ ಅಸ್ತಿತ್ವದಲ್ಲಿರುವುದಿಲ್ಲ” ಎಂದು ಹೇಳಿದ್ದರು.
“AI ಮತ್ತು ಹುಮನಾಯ್ಡ್ ರೋಬೋಟ್ಗಳು ವಾಸ್ತವವಾಗಿ ಬಡತನವನ್ನು ತೊಡೆದುಹಾಕುತ್ತವೆ” ಎಂಬ ಎಲಾನ್ ಮಸ್ಕ್ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ನಿಖಿಲ್ ಕಾಮತ್ ಅವರೊಂದಿಗಿನ ಅವರ ಸಂಭಾಷಣೆಯಲ್ಲಿ, “ದೀರ್ಘಾವಧಿಯಲ್ಲಿ ಹಣವು ಒಂದು ಪರಿಕಲ್ಪನೆಯಾಗಿ ಅಂತಿಮವಾಗಿ ಕಣ್ಮರೆಯಾಗುತ್ತದೆ” ಎಂದು ಎಲಾನ್ ಮಸ್ಕ್ ಭವಿಷ್ಯ ನುಡಿದಿದ್ದಾರೆ.



