ಹಾವೇರಿ ಎಪ್ರಿಲ್ 01: ಕೆಎಸ್ ಆರ್ ಟಿಸಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬಸ್ ಪ್ಲಾಟ್ಫಾರ್ಮ್ ಮೇಲೆ ನುಗ್ಗಿದ ಪರಿಣಾಮ ಎರಡು ವರ್ಷದ ಪುಟ್ಟ ಮಗು ಸಾವನ್ನಪ್ಪಿದ್ದು, ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ,

ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ವೇಳೆಗೆ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಿತ್ತು. ಸವಣೂರು ಪ್ಲಾಟ್ಫಾರ್ಮ್ ಬಳಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದಾಗ, ಸವಣೂರು ಕಡೆಗೆ ತೆರಳಬೇಕಿದ್ದ ಬಸ್ ಅತಿ ವೇಗವಾಗಿ ನಿಲ್ದಾಣಕ್ಕೆ ಬಂದಿದೆ. ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದಿಂದಾಗಿ ಬಸ್ ನಿಯಂತ್ರಣ ತಪ್ಪಿ ನೇರವಾಗಿ ಪ್ಲಾಟ್ಫಾರ್ಮ್ ಮೇಲಿದ್ದ ಜನರ ಮೇಲೆ ಹರಿದಿದೆ.

ಈ ಭೀಕರ ಅಪಘಾತದಲ್ಲಿ ಬಂಕಾಪುರ ಮೂಲದ ಹಜರತ್ ಅಲಿ (2) ಎಂಬ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಬಂಕಾಪುರದ ನಿವಾಸಿಗಳಾದ ವಾಸುದೇವ (44), ಹರ್ಷಾ (6) ಮತ್ತು ಕಾವ್ಯಾಂಜಲಿ (39) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಚಾಲಕನ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.