ಬೆಂಗಳೂರು,ಮಾರ್ಚ್ 31: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳ ಪರ್ವ ಮುಂದುವರಿದಿದೆ. ಜೈಲಿನೊಳಗೆ ನಿಷೇಧಿತ ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದ ಕೈದಿಗಳನ್ನು ಪತ್ತೆಹಚ್ಚಲು ಮುಂದಾದ ಕಾರಾಗೃಹ ಸಿಬ್ಬಂದಿಗೆ, ಆರೋಪಿಗಳು ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.

ಜೈಲಿನಲ್ಲಿ ಮೊಬೈಲ್ ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡ್ಡಿಪಡಿಸಿದ ಕೈದಿಗಳಾದ ರಿಜ್ವಾನ್ ಅಲಿ ಮತ್ತು ಮೊಹಮ್ಮದ್ ಸಾಧಿಕ್, ಸಿಬ್ಬಂದಿಯ ಮೇಲೆ ಕೆಂಡಾಮಂಡಲವಾಗಿದ್ದಾರೆ. “ನೀವು ಇಲ್ಲಿಂದ ಸುಕ್ಷೇಮವಾಗಿ ಮನೆಗೆ ಹೋಗುವುದಿಲ್ಲ, ನಿಮ್ಮನ್ನು ನೇರವಾಗಿ ಸ್ಮಶಾನಕ್ಕೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಕಳೆದ ಹತ್ತು ದಿನಗಳಲ್ಲಿ ಕಾರಾಗೃಹದ ಅಧಿಕಾರಿಗಳು ಒಟ್ಟು 21 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿದ್ದಾರೆ. ಕೈದಿಗಳು ಮೊಬೈಲ್ ಅಡಗಿಸಿಡಲು ಅನುಸರಿಸುತ್ತಿರುವ ವಿಚಿತ್ರ ತಂತ್ರಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಹಾಲಿನ ಪ್ಲಾಸ್ಟಿಕ್ ಕವರ್ಗಳಲ್ಲಿ ಮೊಬೈಲ್ಗಳನ್ನು ಭದ್ರವಾಗಿ ಪ್ಯಾಕ್ ಮಾಡಿ, ಕೊಳಚೆ ನೀರು ಹರಿಯುವ ಡ್ರೈನೇಜ್ ಪೈಪ್ಗಳ ಒಳಗೆ ಮರೆಮಾಚಲಾಗಿತ್ತು. ಇತ್ತೀಚೆಗಷ್ಟೇ ಕೈದಿಗಳು ಜೈಲಿನ ಒಳಗಿನಿಂದಲೇ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬೆನ್ನಲ್ಲೇ ಈ ತಪಾಸಣೆ ತೀವ್ರಗೊಂಡಿತ್ತು.
ಕಾರಾಗೃಹದಲ್ಲಿ ಹೈ-ಟೆಕ್ ಜಾಮರ್ ವ್ಯವಸ್ಥೆ ಇದ್ದರೂ ಮೊಬೈಲ್ ನೆಟ್ವರ್ಕ್ ಹೇಗೆ ಲಭ್ಯವಾಗುತ್ತಿದೆ ಎಂಬ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಜೈಲು ವಾರ್ಡರ್ಗಳು ಹಾಗೂ ಕೆಳಹಂತದ ಸಿಬ್ಬಂದಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಎಸ್ಪಿ ಅಂಶುಕುಮಾರ್ ನೇತೃತ್ವದಲ್ಲಿ ಶಂಕಿತ ಸಿಬ್ಬಂದಿಗಳ ವಿಚಾರಣೆ ನಡೆಸಲು ಉನ್ನತ ಮಟ್ಟದ ಸೂಚನೆ ನೀಡಲಾಗಿದೆ.