DAKSHINA KANNADA
ಬಿಕಿನಿ ಪೋಟೋಶೂಟ್: ಆಕ್ರೋಶದ ಬಳಿಕ ಮಾಡೆಲ್ ಬೃಂದಾ ಅರಸ್ ಕ್ಷಮೆಯಾಚನೆ
ಸುಳ್ಯ ಅಕ್ಟೋಬರ್ 30: ಸುಳ್ಯ ತಾಲೂಕಿನ ದೇವರಗುಡಿ ಜಲಪಾತದಲ್ಲಿ ಅರೆಬೆತ್ತಲಾಗಿ ಫೋಟೋಶೂಟ್ ನಡೆಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ರೂಪದರ್ಶಿ ಬೃಂದಾ ಅರಸ್ ಕ್ಷಮೆಯಾಚಿಸಿದ್ದಾರೆ.
ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದ ತಂಡವೊಂದು ಸುಳ್ಯದ ತೋಡಿಕಾನ ದೇವರಗುಡಿ ಜಲಪಾತದ ಬಳಿ ಫೋಟೋಶೂಟ್ ನಡೆಸಿ ಅದನ್ನು ಇನ್ಸ್ಟಾಗ್ರಾಂ ಗೆ ಅಪ್ ಲೋಡ್ ಮಾಡಿದ್ದು, ಮಾಡೆಲ್ ನ ಬಿಕಿನಿ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ಸಾಮಾಜಿಕ ತಾಣ ಸೇರಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ನಂತರ ಮಾಡೆಲ್ ನಟಿ ಬೃಂದಾ ಅರಸ್ ಕ್ಷಮೆ ಯಾಚಿಸಿದ್ದಾರೆ.
ಸುಳ್ಯದ ತೋಡಿಕಾನ ದೇವರಗುಡಿ ಜಲಪಾತ ಸ್ಥಳೀಯರ ಧಾರ್ಮಿಕ ನಂವಿಕೆಯ ಪ್ರತೀಕವಾಗಿದ್ದು ಈ ಜಲಪಾತದ ಸಮೀಪವೇ ಪ್ರಾಚೀನ ದೇಗುಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದೆ, ಇಂತಹಾ ಪವಿತ್ರ ಸ್ಥಳದಲ್ಲಿ ಫೋಟೋಶೂಟ್ ನಡೆಸಲಾಗಿದೆ.
“ನಮಗೆ ಇದು ಪವಿತ್ರ ಸ್ಥಳವೆಂದು ಗೊತ್ತಿರಲಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ. ನಮ್ಮ ನಡೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ” ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬೃಂದಾ ಹೇಳಿದ್ದಾರೆ.
ಮಾಡೆಲ್ ಬೃಂದಾ ಅರಸ್ ಹಾಗೂ ಇನ್ನೋರ್ವ ನಟಿ ಜಲಪಾತದ ಬಳಿ ಫೋಟೋಶೂಟ್ ಮಾಡಿದ್ದು ಅವರ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರು ದೇವಸ್ಥಾನ ಆಡಳಿತ ಮಂಡಳಿಗೆ ದೂರು ನೀಡಿದ್ದರು.
You must be logged in to post a comment Login