ಮಂಗಳೂರು ಎಪ್ರಿಲ್ 23: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಅತಿಯಾದ ಬಿಸಿಗಾಳಿ ಹಾಗೂ ತೇವಾಂಶಭರಿತ ವಾತಾವರಣ ಇರಲಿದ್ದು, ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಸೆಕೆ ಇದೆ. ಎರಡು ದಿನಗಳ ಹಿಂದೆ ಬಂದ ಮಳೆ ಸ್ವಲ್ಪ ಪ್ರಮಾಣದಲ್ಲಿ ಸೆಕೆಯನ್ನು ಕಡಿಮೆ ಮಾಡಿತ್ತು, ಇದೀಗ ಮತ್ತೆ ಬಿಸಿ ಜಾಸ್ತಿಯಾಗಿದೆ. ದಕ್ಷಿಣ ಕನ್ನಡದ ಅಲ್ಲಲ್ಲಿ ಮಳೆಯಾಗಿದ್ರೂ ಭೂಮಿ ಮಾತ್ರ ತಂಪಾಗಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಕೆಂಡದಂತಹ ಬಿಸಿಲು ಜನರನ್ನ ಹೈರಾಣಾಗಿಸ್ತಿದೆ. ಮುಂದಿನ ಐದು ದಿನಗಳ ಕಾಲ ತೇವಾಂಶ ಮತ್ತು ಬಿಸಿಗಾಳಿ ಹೆಚ್ಚಿರೋದ್ರಿಂದ ಜನರು ಅನಗತ್ಯವಾಗಿ ಬಿಸಿಲಿಗೆ ಬರಬೇಡಿ ಅಂತ ಐಎಂಡಿ ಎಚ್ಚರಿಸಿದೆ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಇರೋದ್ರಿಂದ ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹೊರಗಡೆ ಹೋಗೋದನ್ನ ಅವಾಯ್ಡ್ ಮಾಡಿ ಮತ್ತು ಅತಿ ಹೆಚ್ಚು ನೀರು ಕುಡಿಯಿರಿ ಅಂತ ವೈದ್ಯರು ಕೂಡ ಸಲಹೆ ನೀಡ್ತಾ ಇದ್ದಾರೆ.”