ಬೆಂಗಳೂರು, ಏಪ್ರಿಲ್ 01: ರಾಜ್ಯ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿ, ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೌನ್ಸಿಲ್ ರಿಜಿಸ್ಟ್ರಾರ್ ಮಲ್ಲು ಎಂಬುವವರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಗಾಂಧೀನಗರದಲ್ಲಿರುವ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಚೇರಿಯ ಕರ್ತವ್ಯದ ವೇಳೆ ಆರೋಪಿ ಮಲ್ಲು ಅವರು ಸಂತ್ರಸ್ತೆಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಚೇರಿ ಆವರಣದಲ್ಲಿ ಸಂತ್ರಸ್ತೆಯ ಅಂಗಾಂಗ ಮುಟ್ಟಿ ವಿಕೃತಿ ಮೆರೆದಿದ್ದಲ್ಲದೆ, ಕಚೇರಿಯ ಹೊರಭಾಗದಲ್ಲಿ ಕಾರಿನ ಬಳಿ ತೆರಳಿದಾಗ ಬಲವಂತವಾಗಿ ತಬ್ಬಿಕೊಂಡು ಮುತ್ತು ನೀಡಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಮಹಿಳೆಯನ್ನು ಬಲವಂತವಾಗಿ ಕಾರು ಹತ್ತಿಸಿಕೊಳ್ಳಲು ಎಳೆದಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಯ ಈ ಅಸಭ್ಯ ವರ್ತನೆಯಿಂದ ಆಘಾತಕ್ಕೊಳಗಾದ ಸಂತ್ರಸ್ತೆ, ತಮಗಾದ ದೈಹಿಕ ಮತ್ತು ಮಾನಸಿಕ ಕಿರುಕುಳದ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಪ್ರಾಥಮಿಕ ಪುರಾವೆಗಳ ಆಧಾರದ ಮೇಲೆ ಇಂದು ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.