LATEST NEWS
ಆಹಾರ ಸಾಮಗ್ರಿಗಳ ನಿರಂತರ ಪೂರೈಕೆ: ಜಿಲ್ಲಾಧಿಕಾರಿ ಸೂಚನೆ
ಆಹಾರ ಸಾಮಗ್ರಿಗಳ ನಿರಂತರ ಪೂರೈಕೆ: ಜಿಲ್ಲಾಧಿಕಾರಿ ಸೂಚನೆ
ಮಂಗಳೂರು ಮಾರ್ಚ್ 26: ಜಿಲ್ಲೆಗೆ ಹೊರಜಿಲ್ಲೆಗಳಿಂದ ಬರುವ ಆಹಾರ ಸಾಮಾಗ್ರಿಗಳು, ದಿನಸಿ ಅಂಗಡಿ, ತರಕಾರಿ,ಹಣ್ಣು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ತರಕಾರಿ, ಅಕ್ಕಿ, ಹಣ್ಣುಹಂಪಲು ಸೇರಿದಂತೆ ಆಹಾರ ಸಾಮಗ್ರಿಗಳ ಪೂರೈಕೆ ನಿರಂತರವಾಗಿರಬೇಕು. ಅಕ್ಕಿ, ತರಕಾರಿ, ಹಣ್ಣು ಹಂಪಲು ಸಾಗಿಸುವ ವಾಹನಗಳಿಗೆ ಯಾವುದೇ ಅಡೆತಡೆ ಮಾಡದಂತೆ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಗೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಇತರ ಜಿಲ್ಲೆಗಳಿಂದ ತರಕಾರಿ ಹಣ್ಣು ಹಂಪಲು ಸರಬರಾಜು ಆಗುತ್ತಿದ್ದು, ಅಕ್ಕಿ ಉಡುಪಿಯಿಂದ ರವಾನೆಯಾಗುತ್ತದೆ. ಇಂತಹ ವಾಹನಗಳ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅಡೆತಡೆ ಮಾಡದಂತೆ ಅವರು ಸೂಚಿಸಿದರು.
ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಒಂದೇ ಬಾರಿಗೆ ಸಾಮಗ್ರಿಗಳನ್ನು ಖರೀದಿಸುವ ಅಗತ್ಯವಿಲ್ಲ. ಆಹಾರ ಸಾಮಗ್ರಿ ಸಾಕಷ್ಟು ದಾಸ್ತಾನು ಇರುವಂತೆ ಅಹಾರ ಇಲಾಖೆಗೆ ಸೂಚಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲು ಸ್ಥಳೀಯ ತಂಡ ರಚಿಸಿ ನಿಗಾ ಇಡಲು ಸೂಚಿಸಲಾಗಿದೆ. ಜನರು ಅಂಗಡಿಗಳಲ್ಲಿ ಮುಗಿ ಬೀಳಬಾರದು. ಮಾರುಕಟ್ಟೆಯಲ್ಲಿ ಆಹಾರ ಸಾಮಾಗ್ರಿಗಳ ಸರಬರಾಜು ಕೊರತೆಯಾಗದಂತೆ ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದರು.
You must be logged in to post a comment Login