ತೆಲಂಗಾಣ ಜುಲೈ 07: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ನರ್ಸ್ ಪತ್ನಿಯೊಬ್ಬಳು ತನಗಿದ್ದ ವೈದ್ಯಕೀಯ ಜ್ಞಾನವನ್ನೇ ದುರ್ಬಳಕೆ ಮಾಡಿಕೊಂಡು, ಪತಿಯ ಗ್ಲುಕೋಸ್ (IV) ಲೈನ್ಗೆ ಶೌಚಾಲಯ ಶುಚಿಗೊಳಿಸುವ ಆ್ಯಸಿಡ್ ದ್ರವವನ್ನು ಚುಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಸಂಧ್ಯಾ, ಆಕೆಯ ಪ್ರಿಯಕರ ಅನಿಲ್ ಮತ್ತು ಆತನ ಸ್ನೇಹಿತ ವೆಂಕಟ್ ಸಾಯಿ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಲ್ಫ್ ರಾಷ್ಟ್ರದಿಂದ ಇತ್ತೀಚೆಗಷ್ಟೇ ತಾಯ್ನಾಡಿಗೆ ಮರಳಿದ್ದ ಸಂಧ್ಯಾಳ ಪತಿ ಪ್ರಶಾಂತ್ ಕೊಲೆಯಾದ ದುರ್ದೈವಿ.

ಪೊಲೀಸ್ ತನಿಖೆಯ ಪ್ರಕಾರ, ಸಂಧ್ಯಾ ಮತ್ತು ಪ್ರಶಾಂತ್ ಮಧ್ಯೆ ಅನಿಲ್ ಜೊತೆಗಿನ ಅಕ್ರಮ ಸಂಬಂಧದ ವಿಚಾರವಾಗಿ ತೀವ್ರ ಕೌಟುಂಬಿಕ ಕಲಹ ನಡೆಯುತ್ತಿತ್ತು. ಪ್ರಶಾಂತ್ನನ್ನು ಹಾದಿಯಿಂದ ತಪ್ಪಿಸಲು ಸಂಚು ರೂಪಿಸಿದ ಆರೋಪಿಗಳು, ಮೊದಲಿಗೆ ಪ್ರಶಾಂತ್ಗೆ ಅತಿಯಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಅನಿಲ್ ಮತ್ತು ವೆಂಕಟ್ ಸಾಯಿ ಆತನ ಮೇಲೆ ಭೀಕರ ಹಲ್ಲೆ ನಡೆಸಿ, ಮನೆಯ ಮೇಲ್ಛಾವಣಿಯಿಂದ ಕೆಳಗೆ ತಳ್ಳಿದ್ದಾರೆ. ಆದರೆ, ಗಂಭೀರ ಗಾಯಗಳಾಗಿದ್ದರೂ ಪ್ರಶಾಂತ್ ಅದೃಷ್ಟವಶಾತ್ ಬದುಕುಳಿದಿದ್ದನು. ಆರೋಪಿಗಳು ಜಾಣತನದಿಂದ “ಕುಡಿದ ಮತ್ತಿನಲ್ಲಿ ಆಕಸ್ಮಿಕವಾಗಿ ಬಿದ್ದಿದ್ದಾನೆ” ಎಂದು ನಂಬಿಸಿ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಯಾವಾಗ ಮೊದಲ ಕೊಲೆ ಯತ್ನ ವಿಫಲವಾಯಿತೋ, ಆಸ್ಪತ್ರೆಯಲ್ಲೇ ಪ್ರಶಾಂತ್ನನ್ನು ಮುಗಿಸಲು ಸಂಧ್ಯಾ ಸ್ಕೆಚ್ ಹಾಕಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸಂಧ್ಯಾ, ಪತಿಯ ಐವಿ (IV) ಗ್ಲುಕೋಸ್ ಲೈನ್ಗೆ ಯಾರಿಗೂ ತಿಳಿಯದಂತೆ ಶೌಚಾಲಯ ಸ್ವಚ್ಛಗೊಳಿಸುವ ತೀವ್ರ ಆ್ಯಸಿಡ್ ದ್ರವವನ್ನು ಇಂಜೆಕ್ಟ್ ಮಾಡಿದ್ದಾಳೆ. ಆ ದ್ರವವು ದೇಹದ ರಕ್ತನಾಳ ಸೇರುತ್ತಿದ್ದಂತೆ ಪ್ರಶಾಂತ್ ಸಾವನ್ನಪ್ಪಿದ್ದಾನೆ.
ಜುಲೈ 1 ರಂದು ಪ್ರಶಾಂತ್ ಅವರ ತಾಯಿ ಮಗನ ಸಾವಿನ ಸುತ್ತಲಿನ ಸಂಶಯಾಸ್ಪದ ಸಂದರ್ಭಗಳ ಬಗ್ಗೆ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ವೆಂಕಟ್ ಸಾಯಿ ಮೊದಲು ಬಾಯಿಬಿಟ್ಟಿದ್ದು, ಮೇಲ್ಛಾವಣಿಯಿಂದ ತಳ್ಳಿದ ಮತ್ತು ಆಸ್ಪತ್ರೆಯಲ್ಲಿ ಆ್ಯಸಿಡ್ ಇಂಜೆಕ್ಟ್ ಮಾಡಿದ ಭೀಕರ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಮೂವರನ್ನು ಕೋರ್ಟ್ ಜೈಲಿಗಟ್ಟಿದ್ದು, ವಿಧಿವಿಜ್ಞಾನ ಪರೀಕ್ಷೆಯ (FSL) ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.