ತಿರುವನಂತಪುರಂ ಜೂನ್ 03: ಕೇರಳದ ನೆಡುಮಂಗಾಡ್ನಲ್ಲಿ ಒಂದೂವರೆ ವರ್ಷದ ಗಂಡು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಮರಣೋತ್ತರ ಪರೀಕ್ಷೆಯ (Post-Mortem) ವರದಿ ಹೊರಬಿದ್ದಿದ್ದು, ಇಡೀ ಮಾನವಕುಲವೇ ತಲೆತಗ್ಗಿಸುವಂತಹ ಕ್ರೌರ್ಯದ ಸರಣಿ ಬಯಲಾಗಿದೆ. ಮಗುವಿನ ದೇಹದಾದ್ಯಂತ ಒಳಭಾಗ ಮತ್ತು ಹೊರಭಾಗ ಸೇರಿದಂತೆ ಬರೊಬ್ಬರಿ 90ಕ್ಕೂ ಹೆಚ್ಚು ಗಾಯಗಳಿರುವುದನ್ನು ವೈದ್ಯರು ಪತ್ತೆಹಚ್ಚಿದ್ದು, ಮಗು ಸಾಯುವ ಮುನ್ನ ವಾರಗಳ ಕಾಲ ನಿರಂತರವಾಗಿ ದೈಹಿಕ ಕಿರುಕುಳಕ್ಕೆ ಒಳಗಾಗಿತ್ತು ಪೋಸ್ಟ್ ಮಾರ್ಟಮ್ ವರದಿ ಹೇಳಿದೆ.

ವೈದ್ಯಕೀಯ ಕಾಲೇಜು ಆಸ್ಪತ್ರೆಯ (MCH) ಉನ್ನತ ಮೂಲಗಳ ಪ್ರಕಾರ, ಮಗುವಿನ ತಲೆ ಮತ್ತು ಎದೆಯ ಭಾಗಕ್ಕೆ ಬಿದ್ದ ಬಲವಾದ ಪೆಟ್ಟುಗಳೇ ಸಾವಿಗೆ ಅಂತಿಮ ಕಾರಣವಾಗಿವೆ. ಮಗುವಿನ ತಲೆಬುರುಡೆಯಲ್ಲಿ ಗಂಭೀರ ಗಾಯವಾಗಿದ್ದು, ಏಳು ಪಕ್ಕೆಲುಬುಗಳು ಸೇರಿದಂತೆ ದೇಹದ ಹಲವು ಮೂಳೆಗಳು ಮುರಿದುಹೋಗಿವೆ. ಅಲ್ಲದೆ ತೀವ್ರ ಆಂತರಿಕ ರಕ್ತಸ್ರಾವ ಸಂಭವಿಸಿದೆ. “ದೇಹದ ಮೇಲಿರುವ ಗಾಯಗಳಲ್ಲಿ ಕೆಲವು ಹಳೆಯದಾಗಿದ್ದು, ಇನ್ನು ಕೆಲವು ಇತ್ತೀಚಿನದ್ದಾಗಿವೆ. ಗಾಯಗಳು ಗುಣವಾಗುವ ವಿವಿಧ ಹಂತಗಳಲ್ಲಿದ್ದು, ಮಗುವನ್ನು ದೀರ್ಘಕಾಲದವರೆಗೆ ಪದೇ ಪದೇ ಭೀಕರ ಹಲ್ಲೆಗೆ ಒಳಪಡಿಸಲಾಗಿದೆ ಎಂಬುದಕ್ಕೆ ಇದು ಸ್ಪಷ್ಟ ಪುರಾವೆ” ಎಂದು ವೈದ್ಯರು ತಿಳಿಸಿದ್ದಾರೆ.

ಮಗುವಿನ ಸಾವಿಗೆ ಎರಡು ಮೂರು ವಾರಗಳ ಮುಂಚಿನಿಂದಲೇ ಈ ದೈಹಿಕ ಹಲ್ಲೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಯೊಳಗೆ ಹಲವು ಕಡೆಗಳಲ್ಲಿ ಊತ ಮತ್ತು ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಅತ್ಯಂತ ಅಮಾನವೀಯ ಸಂಗತಿಯೆಂದರೆ, ಮಗುವಿನ ಪಾದಗಳು ಮತ್ತು ಜನನಾಂಗದ ಭಾಗದಲ್ಲಿ ಸುಟ್ಟ ಭೀಕರ ಗಾಯಗಳು ಪತ್ತೆಯಾಗಿವೆ. ಈ ಹಿಂದೆ ಮಗುವಿನ ಮೂಳೆ ಮುರಿತಕ್ಕೆ ಚಿಕಿತ್ಸೆ ಕೊಡಿಸಿದ್ದ ಪೋಷಕರು, ಮಗು ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದೆ ಎಂದು ಸುಳ್ಳು ಕಥೆ ಕಟ್ಟಿದ್ದರು. ಆದರೆ, ಪೊಲೀಸರು ಈಗ ಆ ಹಳೆಯ ಆಸ್ಪತ್ರೆ ದಾಖಲೆಗಳನ್ನು ಮರುಪರಿಶೀಲಿಸುತ್ತಿದ್ದಾರೆ.

ಮೇ 29 ರಂದು ಮಗು ಮಲಗುವ ಮುನ್ನ ಹಾಲು ಮತ್ತು ನೀರು ಕುಡಿದು ಇದ್ದಕ್ಕಿದ್ದಂತೆ ಕೆಮ್ಮಲು ಹಾಗೂ ವಾಂತಿ ಮಾಡಲು ಆರಂಭಿಸಿತು ಎಂದು ಪ್ರಮುಖ ಆರೋಪಿ ಅಶ್ಕರ್ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದನು. ಆದರೆ, ವೈದ್ಯಕೀಯ ವರದಿ ಈತನ ಸುಳ್ಳನ್ನು ಸಂಪೂರ್ಣವಾಗಿ ಬಯಲು ಮಾಡಿದೆ. ಮಗುವಿನ ತಾಯಿ ಅಖಿಲಾ ಮತ್ತು ಆಕೆಯ ಪ್ರಿಯಕರ ಅಶ್ಕರ್ ನಡುವಿನ ಅನೈತಿಕ ಸಂಬಂಧಕ್ಕೆ ಈ ಮಗು ಅಡ್ಡಿಯಾಗಿತ್ತು. ಇದೇ ಕಾರಣಕ್ಕಾಗಿ ಅಶ್ಕರ್ ಆ ಹಸುಗೂಸಿನ ಮೇಲೆ ರಾಕ್ಷಸನಂತೆ ಹಲ್ಲೆ ನಡೆಸಿ ಸಾಯಿಸಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.
ಈ ಪ್ರಕರಣದಲ್ಲಿ ಕೇವಲ ಅಶ್ಕರ್ ಮಾತ್ರವಲ್ಲದೆ ತಾಯಿ ಅಖಿಲಾ ಮತ್ತು ಇತರರ ಭಾಗೀದಾರಿಕೆಯೂ ಇರುವ ಸಾಧ್ಯತೆ ಇದ್ದು, ಹೆಚ್ಚುವರಿ ಆರೋಪಿಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಮತ್ತು ಬಾಲ ನ್ಯಾಯ ಕಾಯ್ದೆಯಡಿ (Juvenile Justice Act) ಮೊಕದ್ದಮೆ ದಾಖಲಿಸಲಾಗಿದೆ. ಜೊತೆಗೆ ಮಗು ಹಿಂದುಳಿದ ವರ್ಗಕ್ಕೆ ಸೇರಿದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ (SC/ST Act) ಕಠಿಣ ನಿಬಂಧನೆಗಳನ್ನು ಹೇರಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಡಿವೈಎಸ್ಪಿಗೆ ವರ್ಗಾಯಿಸಲಾಗಿದ್ದು, ಅಶ್ಕರ್ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ.