ಮಂಗಳೂರು ಫೆಬ್ರವರಿ 06: ನಂತೂರು ಹಾಗೂ ಕೆಪಿಟಿ ಪ್ಲೈಓವರ್ ಕುರಿತಂತೆ ಮಾರ್ಚ್ ಅಂತ್ಯದೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಕೆಪಿಟಿ ಮೇಲ್ಸೇತುವೆ ಯೋಜನೆ ಕೈಬಿಟ್ಟಿಲ್ಲ. ನಂತೂರು ಅಥವಾ ಕೆಪಿಟಿ ಬಳಿಯ ಸಂಚಾರ ದಟ್ಟಣೆ ನಿವಾರಣೆ ಮಾತ್ರ ನಮ್ಮ ಉದ್ದೇಶವಲ್ಲ. ನಗರದ ಸಮಗ್ರ ಸಂಚಾರ ನಿರ್ವಹಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇಲ್ಸೇತುವೆ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಕೂಳೂರಿನಿಂದ ನಂತೂರಿನವರೆಗೂ ಮೇಲ್ಸೇತುವೆ ನಿರ್ಮಿಸಬೇಕೇ, ಎಲ್ಲೆಲ್ಲ ಸರ್ವಿಸ್ ರಸ್ತೆ ಅಗತ್ಯವಿದೆ, ಎಷ್ಟು ಭೂಸ್ವಾಧೀನದ ಅಗತ್ಯ ಇದೆ, ಎಷ್ಟು ಇಳಿಜಾರನ್ನು ಕಾಯ್ದುಕೊಳ್ಳಬೇಕಾಗುತ್ತದೆ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ ಸಮಾಲೋಚನೆ ನಡೆಯುತ್ತಿದೆ. ಎನ್ಎಚ್ಎಐ ಅಧಿಕಾರಿಗಳು ಮಾರ್ಚ್ ಅಂತ್ಯದೊಳಗೆ ನನಗೆ ಡಿಪಿಆರ್ ಕುರಿತ ಪ್ರಸ್ತಾವ ಸಲ್ಲಿಸಲಿದ್ದಾರೆ’ ಎಂದರು.
ಜಿಲ್ಲೆಯಲ್ಲಿ ಕನ್ನಡದ ಜೊತೆ ತುಳು ಕೊಂಕಣಿ ಮತ್ತಿತರ ಭಾಷೆ ಬಳಸುವುದಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಕನ್ನಡವನ್ನು ಮಾತ್ರ ಬಳಸ ಬೇಕು ಎಂದು ನಾನು ಆದೇಶ ಮಾಡಿಲ್ಲ.ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗುತ್ತಿರುವ ಬಗ್ಗೆ ನಿಗಾವಹಿಸಲು ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಈಚೆಗೆ ಸೂಚಿಸಿದ್ದೆ. ಅದರ ಅರ್ಥ ತುಳು ಕೊಂಕಣಿ ಬಳಸಬಾರದು ಎಂದಲ್ಲ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಪಿಲಿಕುಳ ಜೈವಿಕ ಉದ್ಯಾನವನ್ನು (ಮೃಗಾಯಲ) ಮುಚ್ಚುವಂತೆ ಹೈಕೋರ್ಟ್ ಆದೇಶ ಮಾಡಿಲ್ಲ. ಅಂತಹ ಯಾವುದೇ ಆದೇಶ ನಮಗೆ ತಲುಪಿಲ್ಲ. ಅಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಆ ಮೃಗಾಲಯದ ಆರೋಗ್ಯದ ಲಕ್ಷಣ. ಅಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಪ್ರಾಣಿಗಳಿರುವುದು ನಿಜ. ಇದನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ತೆಕ್ಕೆಗೆ ವಹಿಸಲು ಅಂತಿಮ ಸುತ್ತಿನ ಮಾತುಕತೆ ನಡೆದಿದೆ. ನಿರ್ವಹಣೆ ವೆಚ್ಚ ವರಮಾನ ಹಂಚಿಕೆ ಕುರಿತ ಚರ್ಚೆಗಳು ನಡೆದಿವೆ’ ಎಂದು ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.