ತೆಲಂಗಾಣ ಜೂನ್ 27: ಆಸ್ತಿ ವಿವಾದ, ಮರುಪಾವತಿಸದ ಸಾಲ ಮತ್ತು ಹಳೇ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಕ್ರೂರವಾಗಿ ಇರಿದು ಕೊಂದಿದ್ದ ಭೀಕರ ಹತ್ಯಾಕಾಂಡದ ರಹಸ್ಯವನ್ನು ನಲ್ಗೊಂಡ ಪೊಲೀಸರು ಕೇವಲ ನಾಲ್ಕೇ ದಿನಗಳಲ್ಲಿ ಯಶಸ್ವಿಯಾಗಿ ಭೇದಿಸಿದ್ದಾರೆ. ಕೊಲೆ ಮಾಡಲು ಹಾಗೂ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ಕಲಿಯಲು ಪ್ರಮುಖ ಆರೋಪಿ ಆನ್ಲೈನ್ನಲ್ಲಿ ಕ್ರೈಂ ವಿಡಿಯೋಗಳನ್ನು ವೀಕ್ಷಿಸಿದ್ದ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೊಹಮ್ಮದ್ ಸುಲ್ತಾನ್, ಅವರ ಪತ್ನಿ ಹಸೀನಾ, ಮಗ ಮುಜಮ್ಮಿಲ್ ಮತ್ತು ಮಗಳು ಅಫ್ಸರಾ ಹತ್ಯೆಗೊಳಗಾದ ದುರ್ದೈವಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ, ಹೈದರಾಬಾದ್ ಮೂಲದ ಕಾರು ಚಾಲಕ ಸೈಯದ್ ಅಸ್ಲಾಂ, ಆತನ ಪತ್ನಿ ತಬಸ್ಸುಮ್, ಮೊಹಮ್ಮದ್ ಸೊಹೈಲ್ ಮತ್ತು ಹೇಮಂತ್ ಕುಮಾರ್ ಎಂಬ ನಾಲ್ವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ಜೂನ್ 22ರಂದು ನಲ್ಗೊಂಡದ ಬೀಗ ಹಾಕಿದ್ದ ಮನೆಯೊಂದರಿಂದ ವಿಪರೀತ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮನೆಗೆ ನುಗ್ಗಿ ಪರಿಶೀಲಿಸಿದಾಗ ಬೆಡ್ಶೀಟ್ಗಳಲ್ಲಿ ಸುತ್ತಿಟ್ಟಿದ್ದ ನಾಲ್ವರ ಕೊಳೆತ ಶವಗಳು ಪತ್ತೆಯಾಗಿದ್ದವು. ಪತ್ತೆ ವಿಳಂಬವಾಗಲಿ ಎಂದೇ ಆರೋಪಿಗಳು ಕೃತ್ಯದ ಬಳಿಕ ಮನೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಜೂನ್ 19ರ ಮುಂಜಾನೆಯೇ ಈ ಭೀಕರ ಕೃತ್ಯ ನಡೆದಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶರತ್ ಚಂದ್ರ ಪವಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, “ಈ ಇಡೀ ಪಿತೂರಿಯ ಹಿಂದೆ ₹2 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ, ಮರುಪಾವತಿಸದ ಸಾಲಗಳು ಮತ್ತು ಕೌಟುಂಬಿಕ ಕಲಹಗಳಿದ್ದವು. ಮುಖ್ಯ ಆರೋಪಿ ಅಸ್ಲಾಂ ತೀವ್ರ ಆರ್ಥಿಕ ತೊಂದರೆಯಲ್ಲಿದ್ದ. ಆತ ತನ್ನ ಹೆಂಡತಿಯ ಚಿಕ್ಕಮ್ಮ ಹಸೀನಾ ಅವರಿಂದ ಈ ಹಿಂದೆ ₹1 ಲಕ್ಷ ಸಾಲ ಪಡೆದಿದ್ದ. ನಂತರ ಹೊಸ ಕಾರು ಖರೀದಿಸಲು ಮತ್ತೆ ₹1 ಲಕ್ಷ ಕೇಳಿದಾಗ ಹಸೀನಾ ನಿರಾಕರಿಸಿದ್ದರಲ್ಲದೆ, ಹಳೇ ಸಾಲಕ್ಕೆ ಬಡ್ಡಿ ಕಟ್ಟದಿದ್ದಕ್ಕೆ ಅಣಕಿಸಿದ್ದರು. ಇದೇ ದ್ವೇಷದಲ್ಲಿ ಇಡೀ ಕುಟುಂಬವನ್ನು ಮುಗಿಸಲು ಅಸ್ಲಾಂ ಸಂಚು ರೂಪಿಸಿದ್ದ. ಈತನಿಗೆ ಹಸೀನಾ ವಿರುದ್ಧ ದ್ವೇಷ ಹೊಂದಿದ್ದ ಪತ್ನಿ ತಬಸ್ಸುಮ್ ಕೂಡ ಪ್ರಚೋದನೆ ನೀಡಿದ್ದಳು” ಎಂದು ತಿಳಿಸಿದ್ದಾರೆ.
ಜೂನ್ 19ರ ಮುಂಜಾನೆ ಮನೆಗೆ ನುಗ್ಗಿದ ಅಸ್ಲಾಂ ಮತ್ತು ಆತನ ಗ್ಯಾಂಗ್ ಮೊದಲು ಹಸೀನಾಳನ್ನು ಇರಿದು ಕೊಂದಿದ್ದಾರೆ. ನಂತರ ಇಡೀ ಕುಟುಂಬದ ಮೇಲೆ ಮುಗಿಬಿದ್ದಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸುಲ್ತಾನ್ಗೆ 6, ಹಸೀನಾಗೆ 7, ಮಗಳು ಅಫ್ಸರಾಗೆ 9 ಮತ್ತು ಮಗ ಮುಜಮ್ಮಿಲ್ಗೆ ಬರೋಬ್ಬರಿ 16 ಬಾರಿ ಇರಿಯಲಾಗಿರುವುದು ಪತ್ತೆಯಾಗಿದೆ. ಮುಜಮ್ಮಿಲ್ ಪ್ರಾಣ ಉಳಿಸಿಕೊಳ್ಳಲು ಆರೋಪಿಗಳ ಎದುರು ತೀವ್ರ ಪ್ರತಿದಾಳಿ ನಡೆಸಿದ್ದರಿಂದ ಆತನಿಗೆ ಅತಿ ಹೆಚ್ಚು ಬಾರಿ ಇರಿಯಲಾಗಿದೆ. ಇನ್ನು ಬಾಲಕಿ ಅಫ್ಸರಾ ಜೀವ ಉಳಿಸಿಕೊಳ್ಳಲು ಹಾಸಿಗೆಯ ಕೆಳಗೆ ಅಡಗಿಕೊಳ್ಳಲು ಯತ್ನಿಸಿದರೂ, ಆಕೆಯನ್ನು ಹೊರಗೆ ಎಳೆದು ತಂದು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯ ನಂತರ ಆರೋಪಿಗಳು ಮನೆಯಲ್ಲಿದ್ದ ನಗದು, ಚಿನ್ನ ಮತ್ತು ಆಸ್ತಿ ದಾಖಲೆಗಳನ್ನು ದೋಚಿ, ಚಿನ್ನವನ್ನು ₹5.30 ಲಕ್ಷಕ್ಕೆ ಅಡಮಾನ ಇಟ್ಟಿದ್ದರು. ಪ್ರಕರಣದ ತನಿಖೆಗಾಗಿ ಎಸ್ಪಿ ಶರತ್ ಚಂದ್ರ ಪವಾರ್ ಐದು ವಿಶೇಷ ತಂಡಗಳನ್ನು ರಚಿಸಿದ್ದರು. ವಿಧಿವಿಜ್ಞಾನ (Forensic) ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಫೋನ್ ಟ್ರ್ಯಾಕಿಂಗ್ ಮೂಲಕ 20ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆ ನಡೆಸಿ ಪೊಲೀಸರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ₹3 ಲಕ್ಷ ನಗದು, ರಕ್ತಸಿಕ್ತ ಬಟ್ಟೆಗಳು, ಕೊಲೆಗೆ ಬಳಸಿದ ಮಾರಕಾಸ್ತ್ರಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.