ಮಂಗಳೂರು ಜನವರಿ 30: ತಮಿಳುನಾಡಿನ ನಾಗರಕೋಯಿಲ್ ಜಂಕ್ಷನ್ ಮತ್ತು ಕರ್ನಾಟಕದ ಮಂಗಳೂರು ಜಂಕ್ಷನ್ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇವೆ ಮಂಗಳವಾರದಿಂದ ಆರಂಭಗೊಂಡಿದೆ.

ಈ ರೈಲು ಸೇವೆ ದಕ್ಷಿಣ ಭಾರತದ ಪ್ರಮುಖ ನಗರಗಳು ಹಾಗೂ ಕರಾವಳಿ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ವೇಗದ ಪ್ರಯಾಣಕ್ಕೆ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಸಂಚಾರ ವೇಳಾಪಟ್ಟಿ
ರೈಲು ಸಂಖ್ಯೆ 16329 (ನಾಗರಕೋಯಿಲ್ ಜಂಕ್ಷನ್–ಮಂಗಳೂರು ಜಂಕ್ಷನ್):
ಈ ರೈಲು ಜನವರಿ 27ರಿಂದ ಪ್ರತೀ ಮಂಗಳವಾರ ಬೆಳಗ್ಗೆ 11.40ಕ್ಕೆ ನಾಗರಕೋಯಿಲ್ ಜಂಕ್ಷನ್ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 5 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 16330 (ಮಂಗಳೂರು ಜಂಕ್ಷನ್–ನಾಗರಕೋಯಿಲ್ ಜಂಕ್ಷನ್):
ಈ ರೈಲು ಜನವರಿ 28ರಿಂದ ಪ್ರತೀ ಬುಧವಾರ ಬೆಳಗ್ಗೆ 8 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟು, ಅದೇ ದಿನ ರಾತ್ರಿ 8.05ಕ್ಕೆ ನಾಗರಕೋಯಿಲ್ ಜಂಕ್ಷನ್ ತಲುಪಲಿದೆ.
ಈ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ಶೋರ್ನೂರ್ ಜಂಕ್ಷನ್, ತಿರೂರ್, ತಲಕ್ಕೇರಿ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಇದಲ್ಲದೆ, ಪ್ರಯಾಣಿಕರ ಬೇಡಿಕೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟು ರೈಲಿಗೆ ಹೆಚ್ಚುವರಿಯಾಗಿ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ ಅದರಂತೆ ತಿರುವನಂತಪುರಂ ಸೆಂಟ್ರಲ್ , ವರ್ಕಲ, ಕೊಲ್ಲಂ ಜಂಕ್ಷನ್, ಕರುನಾಗಪಲ್ಲಿ, ಕಾಯಂಕುಲಂ ಜಂಕ್ಷನ್, ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲಾ, ಚಂಗನಾಕ್ಕೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಆಲುವಾ ಮತ್ತು ತ್ರಿಶೂರ್ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ಹೊಸ ರೈಲು ಸೇವೆಯಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಪ್ರಯಾಣ ಇನ್ನಷ್ಟು ಸುಲಭವಾಗಲಿದ್ದು, ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನಸಂಪರ್ಕಕ್ಕೆ ಉತ್ತೇಜನ ದೊರೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಕೋಯಿಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ಅನ್ನು ಪರಿಚಯಿಸುವುದನ್ನು ರೈಲು ಗ್ರಾಹಕರು ಸ್ವಾಗತಿಸಿದರು, ಆದರೆ ರೈಲು ಸುಮಾರು 700 ಕಿ.ಮೀ ದೂರವನ್ನು ಕ್ರಮಿಸಲು 17.2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಅಂದರೆ ಗಂಟೆಗೆ ಸರಾಸರಿ 40 ಕಿ.ಮೀ ವೇಗದಲ್ಲಿರುತ್ತದೆ ಎಂದು ದೂರಿದರು.