ಮೈಸೂರು, ಏಪ್ರಿಲ್ 19: ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೇವಲ 24 ಗಂಟೆಗಳಲ್ಲಿ ಕೊಲೆ ರಹಸ್ಯವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಕುರ್ಣೇಗಾಲ ಗ್ರಾಮದ ನಿವಾಸಿ ಜವರಪ್ಪ ಕೊಲೆಯಾದ ದುರ್ದೈವಿ. ಇವರ ಪತ್ನಿ ಅಮೃತಾ (26) ಹಾಗೂ ಈಕೆಯ ಪ್ರಿಯಕರ ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ಬಂಧಿತ ಆರೋಪಿಗಳು.
ಜವರಪ್ಪ ಅವರು ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಖಮಯವಾಗಿದ್ದ ಸಂಸಾರದಲ್ಲಿ ಅಮೃತಾ ಮತ್ತು ಸಿದ್ದೇಶ್ ನಡುವಿನ ಅಕ್ರಮ ಸಂಬಂಧ ಬಿರುಗಾಳಿ ಎಬ್ಬಿಸಿತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಪತಿಯನ್ನು ದಾರಿಯಿಂದ ತಪ್ಪಿಸಲು ನಿರ್ಧರಿಸಿದ ಅಮೃತಾ, ಹಬ್ಬದ ನೆಪದಲ್ಲಿ ತವರು ಮನೆಗೆ ತೆರಳಿ ಅಲ್ಲಿಂದಲೇ ಪ್ರಿಯಕರನ ಜೊತೆಗೂಡಿ ಹತ್ಯೆಗೆ ಸ್ಕೆಚ್ ಹಾಕಿದ್ದಳು.
ಕಳೆದ ಏಪ್ರಿಲ್ 16 ರಂದು ಅಮೃತಾ ತನ್ನ ಪತಿಗೆ ಕರೆ ಮಾಡಿ ತವರು ಮನೆಯಿಂದ ಕರೆದುಕೊಂಡು ಹೋಗುವಂತೆ ತಿಳಿಸಿದ್ದಳು. ಪತ್ನಿಯನ್ನು ಕರೆತರಲು ಹೋದ ಜವರಪ್ಪ ನಾಪತ್ತೆಯಾಗಿದ್ದರು. ಏಪ್ರಿಲ್ 17ರ ಮುಂಜಾನೆ ಕುರ್ಣೇಗಾಲ ಗ್ರಾಮದ ಹೊರವಲಯದ ರಸ್ತೆ ಬದಿಯಲ್ಲಿ ಜವರಪ್ಪ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಮೃತರ ಸಹೋದರ ರವಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಸ್ಥಳದಲ್ಲಿ ಸಾಕ್ಷ್ಯಗಳ ಕೊರತೆ ಇದ್ದರೂ, ಪೊಲೀಸರು ತಾಂತ್ರಿಕ ಸೆಲ್ ಮೂಲಕ ಮೊಬೈಲ್ ಕರೆಗಳ ವಿವರ (CDR) ಪರಿಶೀಲಿಸಿದಾಗ ಅಮೃತಾ ಮತ್ತು ಸಿದ್ದೇಶ್ ನಡುವಿನ ಸಂಚು ಬಯಲಾಗಿದೆ. ಪತ್ನಿಯ ಕುಮ್ಮಕ್ಕಿನಿಂದಲೇ ಸಿದ್ದೇಶ್ ಈ ಕೃತ್ಯ ಎಸಗಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಚುರುಕಾಗಿ ಕಾರ್ಯನಿರ್ವಹಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿಯವರು ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಘೋಷಿಸಿದ್ದಾರೆ. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.