ಮಂಡ್ಯ, ಏಪ್ರಿಲ್ 07: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ದಿಶಾ ಸಭೆ ನಡೆಯುತ್ತಿದ್ದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಮಳವಳ್ಳಿಯ ವ್ಯಕ್ತಿಯೊಬ್ಬರು ಜೆಡಿಎಸ್ ಮಾಜಿ ಶಾಸಕ ಡಾ.ಕೆ. ಅನ್ನದಾನಿ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಮಳವಳ್ಳಿ ಮೂಲದ ಪ್ರಸನ್ನ ಎಂಬುವವರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ದೂರು ನೀಡಿದ್ದಾರೆ. ನನ್ನ ಹೆಂಡತಿ ಮತ್ತು ಮಾಜಿ ಶಾಸಕ ಅನ್ನದಾನಿ ನಡುವೆ ಕಳೆದ 10 ವರ್ಷಗಳಿಂದ ಅಕ್ರಮ ಸಂಬಂಧವಿದೆ. ಇದರಿಂದ ನನ್ನ ಸಂಸಾರ ಬೀದಿಗೆ ಬಂದಿದೆ. ಮಾಜಿ ಶಾಸಕ ಅನ್ನದಾನಿ ಅವರು ನನ್ನ ಹೆಂಡತಿಗೆ ಮೈಸೂರಿನಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಕೊಡಿಸಿದ್ದಾರೆ.
ಪ್ರತಿ ದಿನ ರಾತ್ರಿಯಾಗುತ್ತಿದ್ದಂತೆ ಅನ್ನದಾನಿ ಆ ಅಪಾರ್ಟ್ಮೆಂಟ್ಗೆ ಹೋಗುತ್ತಾರೆ ಮತ್ತು ನನ್ನ ಹೆಂಡತಿಯೊಂದಿಗೆ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅನ್ನದಾನಿ ಅವರು ನನಗೆ ಹೆದರಿಸುತ್ತಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ. ನನ್ನ ಹೆಂಡತಿ ಅನ್ನದಾನಿ ಜೊತೆಯೇ ಇರಲಿ, ನನಗೆ ಅಭ್ಯಂತರವಿಲ್ಲ. ಆದರೆ ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ. ವಿಚ್ಛೇದನ ನೀಡಲು ಆಕೆ 30 ಲಕ್ಷ ರೂಪಾಯಿ ಹಣ ಕೇಳುತ್ತಿದ್ದಾಳೆ ಎಂದು ಪ್ರಸನ್ನ ಕಣ್ಣೀರಿಟ್ಟಿದ್ದಾರೆ.
ಸಭೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಸನ್ನ, ನನ್ನ ಹೆಂಡತಿ ಇನ್ನೊಬ್ಬನ ಜೊತೆ ಇರುವುದನ್ನು ನಾನು ಹೇಗೆ ಸಹಿಸಿಕೊಳ್ಳಲಿ? ನನಗೆ ಆಕೆಯಿಂದ ಮುಕ್ತಿ ಕೊಡಿಸಿ, ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಈ ವಿಚಿತ್ರ ಮತ್ತು ಗಂಭೀರ ಆರೋಪವನ್ನು ಕಂಡು ಅಚ್ಚರಿಗೊಂಡರು. ದೂರು ಸ್ವೀಕರಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಸಭೆ ಮುಗಿದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ, ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸದ್ಯ ಮಂಡ್ಯದಲ್ಲಿ ಈ ಸುದ್ದಿ ಭಾರಿ ಸಂಚಲನ ಮೂಡಿಸಿದ್ದು, ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.