ಕಾರವಾರ, ಏಪ್ರಿಲ್ 27: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅಡಗಿದ್ದ ಪ್ರಮುಖ ಆರೋಪಿ ಮಂಜುನಾಥ್ ಕಾಜಗಾರ ಸೇರಿದಂತೆ ಐವರನ್ನು ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಸಾಲಗಾಂವ ಗ್ರಾಮದ ಮಂಜುನಾಥ ಕಾಜಗಾರ(35), ಕೊಪ್ಪ ಇಂದಿರಾನಗರದ ಶ್ರೀಕಾಂತ ಕಿರಣ್ಣನವರ(22), ಧಾರವಾಡದ ಕೊಂಡವಾಡ ಓಣಿಯ ಮಂಜುನಾಥ ಬೆಳಗಾಂವ(20), ಧಾರವಾಡ ತಾಲ್ಲೂಕು ಹೆಬ್ಬಳ್ಳಿಯ ಅಭಿಷೇಕ ಬಡಶೆಟ್ಟಿ(22), ಧಾರವಾಡ ಮದರಮಡ್ಡಿಯ ದೀಪಕ ನವಲೆ(22) ಬಂಧಿತರು.
‘ಕೃತ್ಯಕ್ಕೆ ಬಳಸಿದ ಎರಡು ಬೈಕ್, ಒಂದು ಕಾರು, ಕಂಟ್ರಿಮೇಡ್ ಎರಡು ಪಿಸ್ತೂಲ್, 6 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಪಿಐ ರಂಗನಾಥ ನೀಲಮ್ಮನವರ ತಿಳಿಸಿದ್ದಾರೆ. ಆರೋಪಿ ಮಂಜುನಾಥ ಕಾಜಗಾರ ಕೊಲೆಯಾದ ಜಮೀರ ಅಹ್ಮದ್ ದರ್ಗಾವಾಲೆ ಜೊತೆ ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್ ವ್ಯವಹಾರ ಇತ್ತು. ಈ ಕುರಿತು ಗಲಾಟೆ ನಡೆದಿತ್ತು. ಈ ಕಾರಣದಿಂದ ನಾಲ್ಕು ಜನ ಆರೋಪಿಗಳಿಗೆ ಹತ್ಯೆ ಮಾಡಲು ಪ್ರೇರೆಪಿಸಿ, ಸುಪಾರಿ ನೀಡಿ, ಕೊಲೆ ಮಾಡಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು. ಭೀಕರ ಹತ್ಯೆ ನಡೆದಿದ್ದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಘಟನೆ ನಡೆದ 24ಗಂಟೆಯಲ್ಲಿಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.