ಮುಂಬೈ: ಮುಂಬೈನ ಜೀವನಾಡಿಯಾಗಿರುವ ಲೋಕಲ್ ರೈಲಿನ ಪ್ರಥಮ ದರ್ಜೆ (ಫಸ್ಟ್ ಕ್ಲಾಸ್) ಕಂಪಾರ್ಟ್ಮೆಂಟ್ನಲ್ಲಿ ಭಾರಿ ಮಳೆಯ ನಡುವೆ ಬಾಗಿಲು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಚಲಿಸುವ ರೈಲಿನಲ್ಲೇ ಸಹಪ್ರಯಾಣಿಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಚರ್ಚ್ಗೇಟ್-ನಲ್ಲಸೋಪರಾ ಫಾಸ್ಟ್ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾಯಾಂಕ್ ಲೋಹರ್ (21) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆರೋಪಿ ರೋಷನ್ ಸುವರ್ಣ ಎಂಬಾತನನ್ನು ಪಶ್ಚಿಮ ರೈಲ್ವೆ ಪೊಲೀಸರು ಮುಂಬೈನ ಕುರ್ಲಾ ಪ್ರದೇಶದಲ್ಲಿ ಬಂಧಿಸಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿತ್ತು. ಈ ವೇಳೆ ಗೋರೆಗಾಂವ್ ಮತ್ತು ಕಂಡಿವಲಿ ನಿಲ್ದಾಣಗಳ ನಡುವೆ ರೈಲು ಚಲಿಸುತ್ತಿದ್ದಾಗ, ಕೋಚ್ನ ಬಾಗಿಲು ಮುಚ್ಚುವ ವಿಚಾರವಾಗಿ ಮಾಯಾಂಕ್ ಲೋಹರ್ ಹಾಗೂ ಆರೋಪಿ ರೋಷನ್ ಸುವರ್ಣ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ, ಕಂಪಾರ್ಟ್ಮೆಂಟ್ನಲ್ಲಿದ್ದ ಇತರ ಕೆಲವು ಪ್ರಯಾಣಿಕರು ಒಟ್ಟಾಗಿ ಆರೋಪಿ ರೋಷನ್ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದರು. ಇದರಿಂದ ತೀವ್ರ ಕೋಪಗೊಂಡ ರೋಷನ್, ತಕ್ಷಣವೇ ತನ್ನ ಬ್ಯಾಗ್ನಲ್ಲಿದ್ದ ಚಾಕುವನ್ನು ಹೊರತೆಗೆದು ಮಾಯಾಂಕ್ ಲೋಹರ್ ಮೇಲೆ ಮುಗಿಬಿದ್ದು ಮಾರಣಾಂತಿಕವಾಗಿ ಇರಿದಿದ್ದಾನೆ.
ರೈಲಿನ ಒಳಗಿನಿಂದ ಲಭ್ಯವಾಗಿರುವ ಗೊಂದಲದ ವೀಡಿಯೊವೊಂದರಲ್ಲಿ, ಕಪ್ಪು ಬಟ್ಟೆ ಧರಿಸಿದ್ದ ಆರೋಪಿ ರೋಷನ್ ಚಾಕು ಹಿಡಿದು ಮಾಯಾಂಕ್ ಮೇಲೆ ಹಲ್ಲೆ ನಡೆಸಿರುವುದು ಪತ್ತೆಯಾಗಿದೆ. ಇರಿತದ ತೀವ್ರತೆಗೆ ರೈಲಿನ ಲೋಹದ ಸೀಟುಗಳು ಮತ್ತು ನೆಲದ ಮೇಲೆಲ್ಲಾ ರಕ್ತದ ಕಲೆಗಳು ಗೆರೆಗಳಂತೆ ಹರಡಿಕೊಂಡಿದ್ದವು. ತೀವ್ರ ರಕ್ತಸ್ರಾವದಿಂದ ಮಾಯಾಂಕ್ ರೈಲಿನ ನೆಲದ ಮೇಲೆ ಬಿದ್ದಾಗ, ಭಯಭೀತರಾದ ಇತರ ಪ್ರಯಾಣಿಕರು ಜೀವಭಯದಿಂದ ದಿಕ್ಕಾಪಾಲಾಗಿ ಚದುರಿದ್ದಾರೆ.
“ಗೋರೆಗಾಂವ್ ಮತ್ತು ಕಾಂಡಿವಲಿ ನಡುವೆ ಮಳೆಯ ನಡುವೆ ರೈಲಿನ ಬಾಗಿಲು ಮುಚ್ಚುವ ಸಣ್ಣ ಕಾರಣಕ್ಕೆ ಇಬ್ಬರು ಪ್ರಯಾಣಿಕರು ಜಗಳವಾಡಿದ್ದರು. ಈ ವೇಳೆ ಆರೋಪಿಯು ಬಲಿಪಶುವಿಗೆ ಚಾಕುವಿನಿಂದ ಇರಿದು, ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಿದ್ದನು. ತನಿಖೆ ನಡೆಸಿ ಈಗ ಆತನನ್ನು ಕುರ್ಲಾದಲ್ಲಿ ವಶಕ್ಕೆ ಪಡೆಯಲಾಗಿದೆ” ಎಂದು ಬೋರಿವಲಿ ರೈಲ್ವೆ ಪೊಲೀಸರ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ದತ್ತಾ ಖುಪ್ರೇಕರ್ ತಿಳಿಸಿದ್ದಾರೆ.