ಮಲ್ಲಪುರಂ ಮಾರ್ಚ್ 16: ಚಹಾ ನೀಡುವ ವಿಚಾರದಲ್ಲಿ ಉಂಟಾದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ತಿರುಗಿ, ಅತ್ತೆಯೊಬ್ಬಳು ತನ್ನ 28 ವರ್ಷದ ಸೊಸೆಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಜಿಲ್ಲೆಯ ಕರುಲೈನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಸುನಿಲ್ ಬಾಬು ಅವರ ಪತ್ನಿ ರಜಿಲಾ (28) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುನಿಲ್ ಬಾಬು ಅವರ ತಾಯಿ ಶಾಂತಾ (72) ಎಂಬುವವರನ್ನು ಪೂಕ್ಕೊಟ್ಟುಂಪಡಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬೆಳಿಗ್ಗೆ 6:30ರ ಸುಮಾರಿಗೆ ಶಾಂತಾ ಅವರು ಸೊಸೆ ರಜಿಲಾ ಬಳಿ ಚಹಾ ಕೇಳಿದ್ದಾರೆ. ರಜಿಲಾ ಚಹಾ ನೀಡಲು ನಿರಾಕರಿಸಿದಾಗ ಉಂಟಾದ ಕೌಟುಂಬಿಕ ಕಲಹದ ನಡುವೆ, ಶಾಂತಾ ಆವೇಶದಿಂದ ಚಾಕುವಿನಿಂದ ಸೊಸೆಯ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ಈ ಘೋರ ಕೃತ್ಯ ರಜಿಲಾ ಅವರ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಕಣ್ಣೆದುರೇ ನಡೆದಿದೆ. ಮಕ್ಕಳ ಚೀರಾಟ ಕೇಳಿ ನೆರೆಹೊರೆಯವರು ಬಂದು ನೋಡಿದಾಗ ರಜಿಲಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ನಿಲಂಬೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.