ಬೆಳಗಾವಿ, ಏಪ್ರಿಲ್ 21: ತನಗೆ ಜನ್ಮ ನೀಡಿ, ಸಾಕಿ ಸಲಹಿದ ತಾಯಿ ಮೃತಪಟ್ಟರೂ ಅವಳ ಅಂತ್ಯಕ್ರಿಯೆ ಮಾಡಲು ಬರಲಾಗದಷ್ಟು ನಿರ್ದಯಿಗಳಾದ ಮಕ್ಕಳ ನಡುವೆ, ಅಪರಿಚಿತ ಸಮಾಜಸೇವಕರು ತಾವೇ ಮಕ್ಕಳಾಗಿ ನಿಂತು ಅಜ್ಜಿಯ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೂಲತಃ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದವರಾದ ಅಂಜನಾ ಧಾಮೊನೆ ಎಂಬ ವೃದ್ಧೆ ಕಳೆದ ಕೆಲವು ಸಮಯದಿಂದ ನಗರದ ಶಾಹುನಗರದ ವೃದ್ಧಾಶ್ರಮದಲ್ಲಿ ವಾಸವಿದ್ದರು. ಇಬ್ಬರು ಗಂಡು ಮಕ್ಕಳಿದ್ದರೂ ಸಹ, ಅವರು ತಾಯಿಯನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮಕ್ಕೆ ತಂದು ಬಿಟ್ಟಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಂಜನಾ ಅವರು ಇತ್ತೀಚೆಗೆ ನಿಧನರಾಗಿದ್ದಾರೆ.
ಅಜ್ಜಿ ನಿಧನರಾದ ವಿಷಯ ತಿಳಿಯುತ್ತಿದ್ದಂತೆಯೇ ವೃದ್ಧಾಶ್ರಮದ ಸಿಬ್ಬಂದಿ ಅವರ ಇಬ್ಬರು ಮಕ್ಕಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಿಮ್ಮ ತಾಯಿ ತೀರಿಕೊಂಡಿದ್ದಾರೆ, ಬಂದು ಅಂತ್ಯಕ್ರಿಯೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಆ ಮಕ್ಕಳ ಉತ್ತರ ಕೇಳಿ ವೃದ್ಧಾಶ್ರಮದವರೇ ಬೆಚ್ಚಿಬಿದ್ದಿದ್ದಾರೆ. ನಮಗೆ ಬರಲು ಸಾಧ್ಯವಿಲ್ಲ, ನೀವೇನಾದರೂ ಮಾಡಿಕೊಳ್ಳಿ, ನೀವೇ ಅಂತ್ಯಕ್ರಿಯೆ ಮುಗಿಸಿ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜನ್ಮ ನೀಡಿದ ತಾಯಿಯ ಅಂತಿಮ ದರ್ಶನ ಪಡೆಯಲೂ ಬಾರದ ಈ ಮಕ್ಕಳ ಕೃತ್ಯ ಕಂಡು ಸ್ಥಳೀಯರು ಮತ್ತು ವೃದ್ಧಾಶ್ರಮದ ಸಿಬ್ಬಂದಿ ಹಿಡಿಶಾಪ ಹಾಕಿದ್ದಾರೆ.
ಆಸರೆಯಾದ ಸಮಾಜಸೇವಕರು
ಮಕ್ಕಳು ಕೈಬಿಟ್ಟಾಗ ಅನಾಥವಾದ ಅಜ್ಜಿಯ ಪಾರ್ಥಿವ ಶರೀರಕ್ಕೆ ಸಮಾಜಸೇವಕರು ಆಸರೆಯಾದರು. ವಿಷಯ ತಿಳಿದ ಕೂಡಲೇ ನಗರಸೇವಕ ಶಂಕರ ಪಾಟೀಲ ಮತ್ತು ಸಮಾಜಸೇವಕ ಗಂಗಾಧರ ಪಾಟೀಲ ಅವರು ಸ್ಥಳಕ್ಕೆ ದೌಡಾಯಿಸಿದರು. ರಕ್ತಸಂಬಂಧಿ ಮಕ್ಕಳಿಗಿಂತ ಮಿಗಿಲಾಗಿ ನಿಂತು, ಮೃತ ಅಜ್ಜಿಯ ಅಂತ್ಯಕ್ರಿಯೆಯನ್ನು ಎಲ್ಲಾ ಶಾಸ್ತ್ರೋಕ್ತ ವಿಧಿವಿಧಾನಗಳ ಮೂಲಕ ನೆರವೇರಿಸಿದರು. ಇವರಿಗೆ ನಿಖಿಲ್ ಅಪ್ಪುಗೋಳ ಹಾಗೂ ಸ್ಮಶಾನ ಭೂಮಿಯ ಸಿಬ್ಬಂದಿ ನಿಸ್ಸಾರ ಅವರು ಸಾಥ್ ನೀಡಿದರು.
ಒಂದು ಕಡೆ ಹೆತ್ತ ತಾಯಿಯನ್ನೇ ಮರೆತ ಮಕ್ಕಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಸಂಬಂಧವೇ ಇಲ್ಲದಿದ್ದರೂ ತಾವೇ ಮಕ್ಕಳ ಸ್ಥಾನದಲ್ಲಿ ನಿಂತು ಗೌರವಯುತವಾಗಿ ಅಜ್ಜಿಯನ್ನು ಮಣ್ಣು ಮಾಡಿದ ಸಮಾಜಸೇವಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಘಟನೆಯು ಮಾನವೀಯತೆ ಇಂದಿಗೂ ಬದುಕಿದೆ ಎಂಬ ಸಂದೇಶವನ್ನು ಸಾರುವ ಜೊತೆಗೆ, ಬದಲಾಗುತ್ತಿರುವ ಸಮಾಜದ ಕರಾಳ ಮುಖವನ್ನೂ ತೆರೆದಿಟ್ಟಿದೆ.