LATEST NEWS
ಕೋರ್ಟ್ ನಲ್ಲಿ ಹಿಂದೂ ಆದ ಮಹಿಳೆ ಚುನಾವಣೆಗೋಸ್ಕರ ಮುಸ್ಲಿಂ ಆಗಲು ಹೇಗೆ ಸಾಧ್ಯ – ಐವನ್ ಡಿಸೋಜಾ ಪ್ರಶ್ನೆ
ಕೋರ್ಟ್ ನಲ್ಲಿ ಹಿಂದೂ ಆದ ಮಹಿಳೆ ಚುನಾವಣೆಗೋಸ್ಕರ ಮುಸ್ಲಿಂ ಆಗಲು ಹೇಗೆ ಸಾಧ್ಯ – ಐವನ್ ಡಿಸೋಜಾ ಪ್ರಶ್ನೆ
ಮಂಗಳೂರು ನವೆಂಬರ್ 3: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ ೧೯ರ ಪಚ್ಚನಾಡಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಗೀತಾ ನಾಯಕ್ ನ್ಯಾಯಾಲಯದಿಂದ ‘ಹಿಂದೂ’ ಎಂದು ಆದೇಶ ಪಡೆದಿದ್ದರೂ ನಾಮಪತ್ರದಲ್ಲಿ ‘ಮುಸ್ಲಿಂ’ ಎಂದು ನಮೂದಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಮಪತ್ರ ಪರಿಶೀಲನೆ ವೇಳೆ ಸಂಗೀತಾ ನಾಯಕ್ ನಿಯಮ ಉಲ್ಲಂಘಿಸಿರುವ ಕುರಿತು ಚುನಾವಣಾಧಿಕಾರಿಗೆ ಆಕ್ಷೇಪ ಸಲ್ಲಿಸಿದ್ದರೂ ಅವರು ನಾಮಪತ್ರ ಅಂಗೀಕಾರ ಮಾಡಿದ್ದಾರೆ. ಇದರ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ರಾಜ್ಯ ಚುನಾವಣಾ ಆಯೋಗಕ್ಕೂ ದೂರು ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಪಚ್ಚನಾಡಿ ವಾರ್ಡ್ ನಲ್ಲಿ ಹಿಂದುಳಿದ ವರ್ಗ ‘ಅ’ ಮಹಿಳೆ ಮೀಸಲಾತಿ ಇದೆ. ಇದಕ್ಕೆ ಬಿಜೆಪಿಯಿಂದ ಸಂಗೀತಾ ಆರ್. ನಾಯಕ್ ನಾಮಪತ್ರ ಸಲ್ಲಿಸುವಾಗ ತಹಸೀಲ್ದಾರ್ ನೀಡಿದ ಸರ್ಟಿಫಿಕೇಟ್ ನಲ್ಲಿ ‘ಮುಸ್ಲಿಂ’ ಎಂದು ಸೇರಿಸಲಾಗಿದೆ. ಹುಟ್ಟಿನಿಂದ ಮುಸ್ಲಿಂ ಆಗಿದ್ದ ಇಸ್ರತ್ ಬೇಗಂ, ರವೀಂದ್ರ ನಾಯಕ್ ಅವರನ್ನು ವಿವಾಹವಾದ ಬಳಿಕ ಸಂಗೀತಾ ನಾಯಕ್ ಆಗಿದ್ದು, 2017ರಲ್ಲಿ ಜನನ ಪ್ರಮಾಣಪತ್ರ ಸೇರಿದಂತೆ ತನ್ನೆಲ್ಲ ದಾಖಲಾತಿಗಳಲ್ಲಿ ‘ಹಿಂದೂ’ ಎಂದು ಬದಲಿಸುವಂತೆ ಕೋರ್ಟ್ ಗೆ ಅರ್ಜಿ ಹಾಕಿದ್ದರು. ನ್ಯಾಯಾಲಯ ಅದೇ ರೀತಿ ತೀರ್ಪನ್ನು ನೀಡಿದೆ. ಆದರೆ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ತಹಸೀಲ್ದಾರ್ ನೀಡಿದ ಸರ್ಟಿಫಿಕೇಟ್ ನಲ್ಲಿ ‘ಮುಸ್ಲಿಂ’ ಎಂದು ನಮೂದಿಸಲಾಗಿದೆ ಎಂದು ಐವನ್ ದಾಖಲೆಗಳನ್ನು ಪ್ರಸ್ತುತಪಡಿಸಿದರು.
ಬಿಜೆಪಿ ಅಭ್ಯರ್ಥಿ ನ್ಯಾಯಾಲಯದ ತೀರ್ಪನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಪಡೆದಿದ್ದಾರೆ. ಈಗ ಅವರ ಜನನ ಪ್ರಮಾಣಪತ್ರದಲ್ಲೂ ‘ಹಿಂದೂ’ ಎಂದು ನಮೂದಾಗಿರುವಾಗ ನಾಮಪತ್ರದಲ್ಲಿ ‘ಮುಸ್ಲಿಂ’ ಎಂದು ನಮೂದಿಸುವುದು ಹೇಗೆ ಸಾಧ್ಯ? ಇಂಥ ಪ್ರಕರಣದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರವನ್ನು ತಿರಸ್ಕರಿಸಿ ಕ್ರಮ ಕೈಗೊಳ್ಳುವ ಎಲ್ಲ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಆದರೆ ಈ ಪ್ರಕರಣದಲ್ಲಿ ಆಕ್ಷೇಪಣೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳ ವ್ಯಾಪ್ತಿಗೆ ಬಾರದಿರುವುದರಿಂದ ನಾಮಪತ್ರ ಕ್ರಮಬದ್ಧವಾಗಿರುವುದಾಗಿ ಹೇಳಿ ಅಂಗೀಕರಿಸಿದ್ದಾರೆ ಎಂದು ಐವನ್ ಆಕ್ಷೇಪಿಸಿದರು.
You must be logged in to post a comment Login