Connect with us

    DAKSHINA KANNADA

    ತುಳು ಲಿಪಿಯ ನಾಮಫಲಕ ಅಳವಡಿಸಿದ ಶಾಸಕ ವೇದವ್ಯಾಸ್ ಕಾಮತ್..!

    ಮಂಗಳೂರು, ಅಕ್ಟೋಬರ್ 16 : ಕರಾವಳಿ ಭಾಗದಲ್ಲಿ ಜನರು ಅತೀ ಹೆಚ್ಚು ಮಾತನಾಡುವ ತುಳುಭಾಷೆಯನ್ನು ಉತ್ತೇಜಿಸುವ ಸಲುವಾಗಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರು ವಿಶಿಷ್ಟ ರೀತಿಯಲ್ಲಿ ಹೆಜ್ಜೆಯಿಟ್ಟಿದ್ದಾರೆ.

    ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ತುಳುನಾಡು ಭಾಗದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದು, ಇಲ್ಲಿನ ಜನರು ಆಡು ಭಾಷೆ ಮತ್ತು ವ್ಯಾವಹಾರಿಕ ಭಾಷೆಯಾಗಿ ಬಳಸುತ್ತಾರೆ. ಆದರೆ ಲಿಪಿಯ ಬಳಕೆ ತೀರಾ ಕಡಿಮೆಯಿದ್ದು, ಕೇವಲ ಬೆರಳೆಣಿಕೆಯ ಜನರು ಮಾತ್ರ ತುಳು ಲಿಪಿ ಬಲ್ಲವರಾಗಿದ್ದಾರೆ.

    ಆದರೆ ಇತ್ತೀಚೆಗೆ ತುಳು ಲಿಪಿಯ ಬಳಕೆಯ ಅವಶ್ಯಕತೆಯ ಬಗ್ಗೆ ತುಳುನಾಡಿನ ಯುವಜನರು ಎಚ್ಚೆತ್ತಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ತುಳು ಭಾಷೆಯ ಉಳಿವಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆ ಪೈಕಿ ತುಳು ಲಿಪಿ ಕಲಿಕಾ ಕಾರ್ಯಕ್ರಮ ಕೂಡ ಒಂದು.

    ತುಳು ಭಾಷೆ,ನಾಡು ನುಡಿಗಾಗಿ ಕೆಲಸ ಮಾಡುವ ಸಂಘಟನೆಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಈ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.ಇದೀಗ ಇದರ ಮುಂದುವರಿದ ಭಾಗವಾಗಿ ತನ್ನ ಕಚೇರಿಯಲ್ಲಿ ತುಳು ಲಿಪಿಯ ನಾಮಫಲಕವನ್ನೇ ಅಳವಡಿಸುವ ಮೂಲಕ ಇತರರು ಹಾಕುವಂತೆ ಪ್ರೇರೇಪಿಸಿದ್ದಾರೆ. ಜೊತೆಗೆ ಪ್ರೊಮೋಟ್ ತುಳು ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

    ಮಂಗಳೂರು ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ತುಳು ಲಿಪಿಯ ನಾಮಫಲಕವನ್ನು ಅಳವಡಿಸಿದ್ದು, ಈ ಕುರಿತು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನೊಂದೆಡೆ ಕರಾವಳಿಯ ಹಲವು ಭಾಗದಲ್ಲಿ ತುಳು ಲಿಪಿಯಲ್ಲೇ ಊರಿನ ಹೆಸರನ್ನು ಹಾಕುವ ಕಾರ್ಯ ಕೂಡ ನಡೆಯುತ್ತಿದ್ದು, ತುಳು ಲಿಪಿ ಕಲಿಕೆಗೆ ಮನ್ನಣೆ ಸಿಗುತ್ತಿರುವ ಹೊತ್ತಲ್ಲೇ ಶಾಸಕರ ಈ ನಿರ್ಧಾರ ಕರಾವಳಿ ಭಾಗದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply