ಕಾರ್ಕಳ ಜನವರಿ 11: ಕಾರ್ಕಳ ಪರುಶುರಾಮ ಥೀಮ್ ಪಾರ್ಕ್ ನ ತಾಮ್ರದ ಶೀಟ್ ಗಳನ್ನು ಕದ್ದ ಕಳ್ಳರನ್ನು ಉಡುಪಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್​ ಮಾಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘ಪರಶುರಾಮ ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಕಾಂಗ್ರೆಸ್​ನ ಬ್ರದರ್ಸ್..! ಥೀಂಪಾರ್ಕ್ ಪಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್. ಕಳೆದ ವಾರ ಥೀಂ ಪಾರ್ಕ್​ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ –ಕಾರ್ಕಳ – ಪರುಶುರಾಮ ಥೀಮ್ ಪಾರ್ಕ್ ನ ತಾಮ್ರದ ಹೊದಿಕೆ ಕದ್ದ ಇಬ್ಬರು ಕಳ್ಳರು ಅರೆಸ್ಟ್

‘ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ, ಮೊಘಲರು ಒಡೆದರೆ ಥೀಂ ಪಾರ್ಕ್​ನ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು. ಕಾರ್ಕಳ ಕಾಂಗ್ರೆಸ್ ಮಖಂಡರು ಈಗ ಏನೆನ್ನುತ್ತಾರೆ? ಪರಶುರಾಮ ಸೃಷ್ಟಿ ಎಂದು ಹೆಸರಾದ ಕರಾವಳಿಯಲ್ಲಿ ಪರಶುರಾಮನ ಹೆಜ್ಜೆಗುರುತುಗಳು ಇರಬಾರದು ಎಂದು ಥೀಂ ಪಾರ್ಕ್ ಕಾಮಗಾರಿಯನ್ನು ನೀವು ಅರ್ಧಕ್ಕೆ ನಿಲ್ಲಿಸಿದ್ದಿರಿ’ ಎಂದು ವಾಗ್ದಾಳಿ ಮಾಡಿದ್ದಾರೆ.
‘ಹಿಂದು ಭಾವನೆಗಳಿಗೆ ಘಾಸಿ ಮಾಡಿರುವ ಜತೆಗೆ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡಿದ ನಿಮ್ಮ ತಪ್ಪು ಮುಂದಿನ ಚುನಾವಣೆಯವರೆಗಲ್ಲ, ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಇಲ್ಲಿಂದಲೇ ಕಾಂಗ್ರೆಸ್ ಅಧಃಪತನದ ಕ್ಷಣಗಣನೆ ಪ್ರಾರಂಭ’ ಎಂದು ಶಾಸಕ ಸುನಿಲ್ ಕುಮಾರ್​​ ಕಿಡಿಕಾರಿದ್ದಾರೆ.

Share Information