ಮಂಗಳೂರು ಎಪ್ರಿಲ್ 22: ವಿರೋಧ ಪಕ್ಷಗಳು ಮಹಿಳಾ ವಿರೋಧಿ ಮನಃಸ್ಥಿತಿಯನ್ನು ಹೊಂದಿರುವುದರಿಂದಲೇ ‘ನಾರಿಶಕ್ತಿ ವಂದನ’ ಮಸೂದೆಯನ್ನು ವಿರೋಧಿಸುತ್ತಿವೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಟೀಕಿಸಿದರು. ನಾರಿ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಬುಧವಾರ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

“ಮಹಿಳೆಯರು ಸಬಲರಾದರೆ ಪುರುಷರು ಮೂಲೆಗುಂಪಾಗುತ್ತಾರೆ ಎಂಬ ಭಯ ವಿರೋಧ ಪಕ್ಷದ ನಾಯಕರಲ್ಲಿದೆ. ಶೇ.33ರಷ್ಟು ಮೀಸಲಾತಿ ಜಾರಿಯಾದರೆ ಮಹಿಳೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ ಎಂಬ ಕಾರಣಕ್ಕೆ ಈ ಮಸೂದೆಯನ್ನು ಸೋಲಿಸಲಾಗಿದೆ. ಇದು ದೇಶದ ಕೋಟ್ಯಂತರ ಮಹಿಳೆಯರಿಗೆ ಮಾಡಿದ ಅವಮಾನ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮಸೂದೆ ಅಂಗೀಕಾರವಾಗುವವರೆಗೂ ಸಂಸತ್ತು ಮತ್ತು ವಿಧಾನಸೌಧದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ವಕೀಲೆ ಸಹನಾ ಕುಂದರ್, “ಮಸೂದೆಗೆ ಹಿನ್ನಡೆಯಾದ ದಿನವು ದೇಶದ ಮಹಿಳೆಯರ ಪಾಲಿಗೆ ಕರಾಳ ದಿನವಾಗಿದೆ. 71 ಕೋಟಿ ಮಹಿಳೆಯರಿಗೆ ವಿಪಕ್ಷಗಳು ದ್ರೋಹ ಎಸಗಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಇದಕ್ಕೆ ಬೆಲೆ ತೆರಬೇಕಾಗುತ್ತದೆ,” ಎಂದು ಎಚ್ಚರಿಸಿದರು.