ಚೆನ್ನೈ ಮೇ 04: ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಎಂದೂ ಕಾಣದ ಮಹತ್ವದ ತಿರುವು ಲಭಿಸಿದ್ದು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸ್ವಕ್ಷೇತ್ರ ಕೊಳತ್ತೂರಿನಲ್ಲಿ ಸೋಲನ್ನು ಅನುಭವಿಸಿದ್ದಾರೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್. ಬಾಬು ಅವರು ಮುಖ್ಯಮಂತ್ರಿ ವಿರುದ್ಧ 7,000 ಮತಗಳ ಅಂತರದ ಐತಿಹಾಸಿಕ ಜಯ ದಾಖಲಿಸಿದ್ದಾರೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟು 22 ಸುತ್ತುಗಳ ಮತ ಎಣಿಕೆಯಲ್ಲಿ ವಿ.ಎಸ್. ಬಾಬು ಅವರು ಆರಂಭಿಕ ಹಂತದಿಂದಲೇ ಪ್ರಾಬಲ್ಯ ಮೆರೆದಿದ್ದರು. 17ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ಅವರು 7,731 ಮತಗಳ ನಿರ್ಣಾಯಕ ಮುನ್ನಡೆ ಸಾಧಿಸುವ ಮೂಲಕ ಜಯದ ಹಾದಿ ಸುಗಮಗೊಳಿಸಿಕೊಂಡಿದ್ದರು. ಅಂತಿಮವಾಗಿ ಸ್ಟಾಲಿನ್ ಅವರ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು.
2011ರಿಂದ ನಿರಂತರವಾಗಿ ಡಿಎಂಕೆ ತೆಕ್ಕೆಯಲ್ಲಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಜೋರಾಗಿ ಬೀಸಿದೆ. ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಆಧಿ ರಾಜಾರಾಂ ಅವರನ್ನು ಸುಮಾರು 70,384 ಮತಗಳ ಬೃಹತ್ ಅಂತರದಿಂದ ಸೋಲಿಸಿದ್ದ ಸ್ಟಾಲಿನ್ ಅವರಿಗೆ, ಈ ಬಾರಿ ಮತದಾರರು ಶಾಕ್ ನೀಡಿದ್ದಾರೆ. ಅಚ್ಚರಿಯ ಬೆಳವಣಿಗೆಯೆಂದರೆ, ಪ್ರಬಲ ಪ್ರತಿಪಕ್ಷವಾಗಿ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಅಭ್ಯರ್ಥಿ ಆರ್. ಸಂತನಕೃಷ್ಣನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಹಿರಿಯ ರಾಜಕಾರಣಿಯಾಗಿರುವ ವಿ.ಎಸ್. ಬಾಬು ಅವರು ಹಿಂದೆ ಡಿಎಂಕೆಯಲ್ಲೇ ಗುರುತಿಸಿಕೊಂಡಿದ್ದವರು. 2006ರಲ್ಲಿ ಪುರಸವಾಕಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಆಗ ಎಐಎಡಿಎಂಕೆ ಅಭ್ಯರ್ಥಿಯನ್ನು 90,000 ಮತಗಳ ಅಂತರದಿಂದ ಸೋಲಿಸಿ ಗಮನ ಸೆಳೆದಿದ್ದರು. ಇತ್ತೀಚೆಗೆ ಟಿವಿಕೆ ಸೇರಿದ್ದ ಅವರು, ತಮ್ಮ ಹಳೆಯ ನಾಯಕನ ವಿರುದ್ಧವೇ ಜಯಭೇರಿ ಬಾರಿಸುವ ಮೂಲಕ ‘ಜೈಂಟ್ ಕಿಲ್ಲರ್’ ಆಗಿ ಹೊರಹೊಮ್ಮಿದ್ದಾರೆ. 2026ರ ಚುನಾವಣಾ ಅಫಿಡಾವಿಟ್ ಪ್ರಕಾರ ಬಾಬು ಅವರು ಒಟ್ಟು ₹3.7 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಯವರ ಈ ಸೋಲು ತಮಿಳುನಾಡು ರಾಜಕೀಯದಲ್ಲಿ ಹೊಸ ಧ್ರುವೀಕರಣಕ್ಕೆ ನಾಂದಿ ಹಾಡುವ ಮುನ್ಸೂಚನೆ ನೀಡಿದೆ.