ಕೋಟ ಮೇ 06: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು ಎಂಬ ಆತಂಕದಿಂದ ಮನೆ ಬಿಟ್ಟು ಹೋಗಿದ್ದ ಇಲ್ಲಿನ ಬಾಲಕನನ್ನು ಕೋಟ ಠಾಣೆ ಪೊಲೀಸರು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪತ್ತೆಹಚ್ಚಿದ್ದಾರೆ.

ಅಭಿಷೇಕ್ ಎಂಬ ವಿದ್ಯಾರ್ಥಿ ಮೇ 3ರಂದು ನೀಟ್ ಪರೀಕ್ಷೆ ಬರೆದಿದ್ದ. ಸೋಮವಾರ ಮಧ್ಯಾಹ್ನ ತಾಯಿಗೆ ಕರೆ ಮಾಡಿ ಮಣಿಪಾಲಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ಆತ, ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ಪೋಷಕರು ಹುಡುಕಾಟ ನಡೆಸಿದಾಗ ಮನೆಯಲ್ಲಿ ಒಂದು ಪತ್ರ ಪತ್ತೆಯಾಗಿದ್ದು, ಅದರಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವ ಭೀತಿಯಿಂದಾಗಿ ಮನೆ ಬಿಟ್ಟು ಹೋಗುತ್ತಿರುವುದಾಗಿ ಅಭಿಷೇಕ್ ತಿಳಿಸಿದ್ದ.
ಆತಂಕಗೊಂಡ ಪೋಷಕರು ತಕ್ಷಣವೇ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಬಾಲಕ ಚಲಿಸಿದ ಹಾದಿಯನ್ನು ಪತ್ತೆಹಚ್ಚಿ ಅಂತಿಮವಾಗಿ ಸಕಲೇಶಪುರದಲ್ಲಿ ಆತನನ್ನು ಪತ್ತೆಹಚ್ಚಿ ಪೋಷಕರ ಬಳಿ ಒಪ್ಪಿಸಿದ್ದಾರೆ.